ರಾಮನಗರ: ಸಮ್ಮಿಶ್ರ ಸರ್ಕಾರದಲ್ಲಿ ನೀಡಿದ ಯೋಜನೆಗಳನ್ನು ಬಿಜೆಪಿ ತಡೆ ಹಿಡಿದಿದೆ. ಅದಕ್ಕೆ ಮಾಜಿ ಸಚಿವ ಸಾರಾ ಮಹೇಶ್ ರಾಜೀನಾಮೆ ನೀಡಿದ್ದರು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ರಾಮನಗರದ ಕೈಲಾಂಚದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾ.ರಾ ಮಹೇಶ್ ರಾಜೀನಾಮೆ ಕೊಟ್ಟಿದ್ದು ಬೇರೆ ಕಾರಣಕ್ಕೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಕ್ಕ ಅನುದಾನ ಯೋಜನೆಗಳನ್ನು ಬಿಜೆಪಿ ಸರ್ಕಾರ ಜೆಡಿಎಸ್-ಕಾಂಗ್ರೆಸ್ ಇರುವ ಕಡೆಗಳಲ್ಲಿ ತಡೆ ಹಿಡಿದಿದ್ದಾರೆ. ಆ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು. ಈಗ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಶಾಸಕ ಸಾರಾ ಮಹೇಶ್ ಮತ್ತು ಅನರ್ಹ ಶಾಸಕ ಎಚ್ ವಿಶ್ವನಾಥ್ ಅವರ ಆಣೆ- ಪ್ರಮಾಣ ವಿಚಾರವಾಗಿ ಮಾತನಾಡಿದ ಅವರು, ಇಬ್ಬರೂ ಹಿರಿಯ ನಾಯಕರೇ, ಅವರು ಒಬ್ಬರ ಮೇಲೊಬ್ಬರು ಆರೋಪ ಮಾಡೋದು ಬೇಕಾಗಿಲ್ಲ. ನಾನು ಸಾ.ರಾ ಮಹೇಶ್ ಜೊತೆ ಮಾತನಾಡಿದ್ದೇನೆ. ವಿಶ್ವನಾಥ್ ಹಿರಿಯರಿದ್ದಾರೆ, ಏನ್ ಬೇಕೋ ಮಾತಾಡಲಿ. ನೀವೇನೂ ರಿಯಾಕ್ಟ್ ಮಾಡೋಕೆ ಹೋಗಬೇಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಕೆಲ ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಜೆಡಿಎಸ್ ಶಾಸಕರು ಪಕ್ಷ ಬಿಟ್ಟು ಹೋಗುವುದು ಕೇವಲ ರೂಮರ್ಸ್ ಅಷ್ಟೇ. ಯಾರೂ ಕೂಡ ಪಕ್ಷ ಬಿಟ್ಟು ಹೋಗುವ ಮನಸ್ಥಿತಿಯಲ್ಲಿಲ್ಲ ಎಂದು ಹೇಳಿದರು.