ಸೂಪರ್ ಸ್ಟಾರ್ ರಜನಿಕಾಂತ್ ಎರಡು ಮೂರು ವಾರಗಳ ಹಿಂದೆಯಷ್ಟೇ ಕಾಂತಾರ (Kantara) ಸಿನಿಮಾ ನೋಡಿ, ರಿಷಬ್ ಶೆಟ್ಟಿ ಅವರನ್ನು ತಮ್ಮ ಮನೆಗೆ ಕರೆಯಿಸಿಕೊಂಡಿದ್ದರು. ತಮ್ಮ ಮನೆಯ ಗೇಟ್ ವರೆಗೂ ಬಂದು, ರಿಷಬ್ (Rishabh Shetty) ಅವರನ್ನು ಬರಮಾಡಿಕೊಂಡಿದ್ದರು. ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ರಿಷಬ್ ಜೊತೆ ಮಾತನಾಡಿ, ಹಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ನಡುವೆ ರಿಷಬ್ ಅವರನ್ನು ಬೀಳ್ಕೊಡುವಾಗ ಚಿನ್ನದ ಸರ ಮತ್ತು ಬಾಬಾ ಇರುವಂತಹ ಲಾಕೆಟ್ (ಪೆಂಡೆಂಟ್) ಕೊಟ್ಟಿದ್ದಾರೆ.
ರಜನಿ (Rajinikanth) ತಮ್ಮ ಗುರುಗಳಾದ ಬಾಬಾ ಅವರನ್ನು ಅತೀ ಹೆಚ್ಚು ಪೂಜಿಸುತ್ತಾರೆ. ಬಾಬಾ ಅವರ ಕೈ ಬೆರಳಿನ ಸಿಂಬಲ್ ಇರುವಂತಹ ಲಾಕೆಟ್ (Pendant) ಗಳನ್ನು ರೆಡಿ ಮಾಡಿಸಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ಯಾರಾದರೂ ಮೆಚ್ಚುವಂತಹ ಕೆಲಸ ಮಾಡಿದಾಗ, ಅವರನ್ನು ಕರೆದು ಲಾಕೆಟ್ ನೀಡುತ್ತಾರೆ. ಈಗ ಲಾಕೆಟ್ ಪಡೆಯುವಂತಹ ಅದೃಷ್ಟ ರಿಷಬ್ ಪಾಲಾಗಿದೆ. ಬಾಬಾ ಇರುವಂತಹ ಚಿನ್ನದ ಲಾಕೆಟ್ ರಿಷಬ್ ಕೊರಳನ್ನು ಅಲಂಕರಿಸಿದೆ. ಇದನ್ನೂ ಓದಿ:ಕೊನೆಗೂ ಮದುವೆ ವಿಚಾರ ರಿವೀಲ್ ಮಾಡಿದ್ರು ತಮಿಳು ನಟ ವಿಶಾಲ್
‘ಅದೊಂದು ಅವಿಸ್ಮರಣೀಯ ಗಳಿಗೆ ಆಗಿತ್ತು. ಒಂದು ಗಂಟೆಗಳ ಕಾಲ ರಜನಿಕಾಂತ್ ಅವರೊಂದಿಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ತುಂಬಾ ದಿನಗಳ ನಂತರ ಒಂದೊಳ್ಳೆ ಸಿನಿಮಾ ನೋಡಿದೆ ಎಂದು ಸ್ವತಃ ಅವರೇ ಹೇಳಿದಾಗ ನನಗಾದ ಸಂಭ್ರಮ ಅಷ್ಟಿಷ್ಟಲ್ಲ. ರಜನಿ ಅವರ ಜೊತೆ ಹಲವು ವಿಚಾರಗಳನ್ನು ಹಂಚಿಕೊಂಡೆ. ಕಾಂತಾರ ಸಿನಿಮಾದಲ್ಲಿ ಬಿಡಿ ಎಸೆದು ಬಾಯಿಗೆ ಹಾಕಿಕೊಳ್ಳುವ ದೃಶ್ಯವನ್ನು ನಿಮ್ಮನ್ನೇ ನೋಡಿ ಕಲಿತದ್ದು ಎಂದು ಹೇಳಿದಾಗ ಆನಂದದಿಂದ ನಕ್ಕರು’ ಎಂದಿದ್ದಾರೆ ರಿಷಬ್ ಶೆಟ್ಟಿ.
ಕಾಂತಾರ ಸಿನಿಮಾದ ಬಗ್ಗೆ ಅವರು ಕೂಡ ಹಲವು ವಿಚಾರಗಳನ್ನು ಮಾತನಾಡಿದರು. ಕಾಂತಾರ ಯಾಕೆ ಇಷ್ಟವಾಯಿತು ಎನ್ನುವ ಕುರಿತು ಸುದೀರ್ಘವಾಗಿ ಮಾತನಾಡಿದರು. ರಜನಿಕಾಂತ್ ಅವರು ಹಾಗೆ ಹೇಳಿದ್ದು ನನಗೆ ದೊಡ್ಡ ಗೌರವ ಸಿಕ್ಕಂತಾಗಿದೆ. ಅವರೊಂದಿಗೆ ಕಳೆದ ಕ್ಷಣಗಳನ್ನೂ ನಾನು ಯಾವತ್ತೂ ಮರೆಯುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ ರಿಷಬ್ ಶೆಟ್ಟಿ.