ಕಾರವಾರ: ಇಂದು ಉತ್ತರಕನ್ನಡ ಜಿಲ್ಲೆಗೆ ಮಳೆ ಹಾನಿಯನ್ನು ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಬೇಕಾಗಿತ್ತು. ಆದರೆ ಬೆಂಗಳೂರಿಗೆ ತುರ್ತಾಗಿ ಬರಬೇಕಾಗಿರುವ ಕಾರಣ ಉತ್ತರಕನ್ನಡ ಜಿಲ್ಲೆ ಪ್ರವಾಸವನ್ನು ಸಿಎಂ ರದ್ದುಗೊಳಿಸಿದ್ದಾರೆ.
ಜಿಲ್ಲೆಯ ಭಟ್ಕಳ ತಾಲೂಕಿನ ಗೊರಟೆ ಗ್ರಾಮದಲ್ಲಿ ಕಡಲ ಕೊರೆತದಿಂದ ಆದ ಹಾನಿಯನ್ನು ವೀಕ್ಷಣೆ ಮಾಡಲು ಹೋಗಬೇಕಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ರದ್ದು ಪಡಿಸಿದ್ದು, ಪ್ರವಾಹ ಪೀಡಿತ ಉಡುಪಿ ಜಿಲ್ಲೆಗೆ ಮಾತ್ರ ಭೇಟಿ ನೀಡಿ ಮಳೆಯಿಂದ ಉಂಟಾದ ಹಾನಿಯನ್ನು ವೀಕ್ಷಣೆ ಮಾಡಲಿದ್ದಾರೆ. ನಂತರ ಉಡುಪಿಯಲ್ಲಿ ಕರಾವಳಿ ಭಾಗದ ಅಧಿಕಾರಿಗಳೊಂದಿಗೆ ಪ್ರವಾಹ ಹಾನಿ ಕುರಿತು ಸಭೆಯನ್ನು ನಡೆಸಲಿದ್ದಾರೆ. ಆದರೆ, ಮುಂದಿನ 10 ದಿನಗಳ ಒಳಗೆ ಭೇಟಿ ಭಟ್ಕಳಕ್ಕೆ ಹೋಗಲಿದ್ದಾರೆ.
ಈಗಾಗಲೇ ಮಳೆಯ ಅಬ್ಬರಕ್ಕೆ ಉತ್ತರ ಕನ್ನಡ ಜಿಲ್ಲೆ ತತ್ತರಿಸಿ ಹೋಗಿದೆ. ಜಿಲ್ಲೆಯಲ್ಲಿ ಮಳೆಯಿಂದ 127 ಕೋಟಿ ನಷ್ಟವಾಗಿದೆ. ನಿರಂತರ ಮಳೆಗೆ ಕಡಲ ಕೊರೆತ, ಹೆದ್ದಾರಿಯಲ್ಲಿ ಗುಡ್ಡ ಕುಸಿತವಾಗಿ ಮನೆಗಳಿಗೆ ನೀರು ನುಗ್ಗಿ ಅನಾಹುತವಾಗಿದೆ. ಜೋಯಿಡಾ ಭಾಗದಲ್ಲಿ ನಿರಂತರ ಗುಡ್ಡ ಕುಸಿತವಾಗುತ್ತಿದ್ದು, ರಾಜ್ಯ ಹೆದ್ದಾರಿ ಸಂಚಾರವನ್ನು ಬಂದ್ ಮಾಡಲಾಗಿದೆ. ಇನ್ನು ಜಿಲ್ಲೆಯ ಕಾಳಿ, ವರದಾ, ಅಘನಾಶಿನಿ, ಗಂಗಾವಳಿ, ಶರಾವತಿ ನದಿ ಅಪಾಯದ ಮಟ್ಟ ಹರಿದು ತೀರ ಪ್ರದೇಶಗಳ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಇದನ್ನೂ ಓದಿ: ಕೃಷ್ಣೆಯಿಂದ ಬಸವಸಾಗರ ಡ್ಯಾಮ್ಗೆ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ – ಯಾದಗಿರಿಯಲ್ಲಿ ಮುಳುಗಡೆ ಭೀತಿ
ಜಿಲ್ಲೆಯಲ್ಲಿ ಸುರಿದ ಅಬ್ಬರದ ಮಳೆ ಹಳಿಯಾಳದಲ್ಲಿ ಮೂರು ಜೀವಗಳನ್ನು ಬಲಿ ಪಡೆದಿದೆ. ಮಳೆಯ ಅಬ್ಬರಕ್ಕೆ 273 ಮನೆಗಳಿಗೆ ಹಾನಿಯಾಗಿದ್ದು, 698 ಜನರು ತೊಂದರೆಗೊಳಗಾಗಿದ್ದು, 209 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. 124 ಶಾಲೆಗಳು, 147 ಅಂಗನವಾಡಿ ಕೇಂದ್ರ ಹಾನಿಗೊಳಗಾಗಿದ್ದು, ಜಿಲ್ಲೆಯ ಒಟ್ಟು 499.51 ಕಿಮೀ ರಸ್ತೆಗಳು ಹಾನಿಯಾಗಿದ್ದು, 71 ಸೇತುವೆ ಹಾನಿಯಾಗಿದೆ. 1779 ವಿದ್ಯುತ್ ಕಂಬಗಳು, 18.51 ಲೈನುಗಳು, 77 ಟ್ರಾನ್ಸ್ಫಾರ್ಮಗಳು ಹಾನಿಯಾಗಿದ್ದು, 0.42 ಹೆಕ್ಟೇರ್ ತೋಟಗಾರಿಕಾ ಬೆಳೆ ನಷ್ಟವಾಗಿದೆ. ಇದನ್ನೂ ಓದಿ: ರಾಜೀನಾಮೆಗೂ ಮುನ್ನವೇ ಮಾಲ್ಡೀವ್ಸ್ಗೆ ಹಾರಿದ ಗೊಟಬಯ ರಾಜಪೆಕ್ಸೆ