Districts
ರಥೋತ್ಸವ ವೇಳೆ ತಪ್ಪಿದ ಅನಾಹುತ- ಭಕ್ತರ ಮೇಲೆ ಲಾಠಿ ಪ್ರಹಾರ

ರಾಯಚೂರು: ನಿಗದಿ ಮಾಡಿದ್ದ ಸ್ಥಳಕ್ಕಿಂತ ಮುಂದಕ್ಕೆ ರಥ ಎಳೆದು ಅಪಾಯ ಸೃಷ್ಟಿಸಿದ ಭಕ್ತರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿರುವ ಘಟನೆ ರಾಯಚೂರು ತಾಲೂಕಿನ ಮಟಮಾರಿಯಲ್ಲಿ ನಡೆದಿದೆ.
ಗ್ರಾಮದ ವೀರಭದ್ರೇಶ್ವರ ಸ್ವಾಮಿ ಜಾತ್ರೆ ವೇಳೆ ಭಕ್ತರ ಮೇಲೆ ಲಘು ಲಾಠಿ ಪ್ರಹಾರ ನಡೆದಿದೆ. ಕೋವಿಡ್ ಹಿನ್ನೆಲೆ ವಿಜೃಂಭಣೆಯಿಂದ ಜಾತ್ರೆ ಆಚರಣೆ ಮಾಡಲು ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಸರಳವಾಗಿ ರಥೋತ್ಸವ ಆಚರಿಸಲು ಸ್ಥಳ ನಿಗದಿ ಮಾಡಲಾಗಿತ್ತು. ಆದರೆ ಸೂಚನೆ ಮೀರಿ ನಡೆದ ರಥೋತ್ಸವ ವೇಳೆ ಹಗ್ಗ ತುಂಡಾಗಿ ಆತಂಕ ಸೃಷ್ಟಿಯಾಗಿತ್ತು.
ಪೊಲೀಸ್ ವಾಹನದೆಡೆಗೆ ರಥ ನುಗ್ಗಿ, ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ. ನಿಗದಿಯಾಗಿದ್ದ ಸ್ಥಳಕ್ಕಿಂತಲೂ ರಥವನ್ನು ಮುಂದಕ್ಕೆ ಎಳೆದಿದ್ದಲ್ಲದೆ ಸೂಚನೆಗಳನ್ನ ಮೀರಿ ನೂರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಭಕ್ತರನ್ನ ಚದುರಿಸಿದ್ದಾರೆ.
