ಗದಗ: ರಾಹುಲ್ ಗಾಂಧಿ (Rahul Gandhi) ಅವರ ತಲೆ ರೈಲ್ವೇ ಹಳಿ ಇದ್ದಂತೆ. ಅವರ ಬುದ್ಧಿಗೂ, ಅವರಿಗೂ ಎಲ್ಲೂ ಭೇಟಿ ಆಗೋದಿಲ್ಲ. ಪ್ಯಾರಲಲ್ ಆಗಿ ಹೋಗುವ ಹಳಿ ಎಲ್ಲಿಯೂ ಕೂಡೋದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ್ (CC Patil) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ (Bharat Jodo Yatra) ಅಪಹಾಸ್ಯದ ಒಂದು ಪರಿಮಿತಿ. ಭಾರತ್ ಜೋಡೋ ಹೆಸರಿಟ್ಟವರಿಗೆ ಸತ್ಕಾರ ಮಾಡಬೇಕು. ಇವರು ಮಾಡುವ ಭಾರತ ಜೋಡೋಗೆ ಅರ್ಥ ಇದೆಯಾ? ಹರಿದಾಗ, ಮುರಿದಾಗ, ವಿಂಗಡನೆ, ವಿಭಜನೆ ಆದಾಗ ಜೋಡೋ ಬರುತ್ತದೆ. ಅಂತಹ ಪ್ರಸಂಗ ಏನಿದೆ ಇದರಲ್ಲಿ? ಯೇ ಭಾರತ್ ಜೋಡೋ? ಯಾ ತೋಡೋ? ಎಂದು ತಿರುಗೇಟು ನೀಡಿದರು.
ರಾಹುಲ್ ತಾತ, ಮುತ್ತಾತ, ಅಜ್ಜಿಯರು ಭಾರತದಿಂದ ಜಮ್ಮು ಕಾಶ್ಮೀರವನ್ನು ಬೇರೆ ಮಾಡಿದರು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಆರ್ಟಿಕಲ್ 370 ತೆಗೆದು ಭಾರತ ಜೋಡಿಸಿದರು. ಕಾಶ್ಮೀರವನ್ನು ಭಾರತದ ಅವಿಭಾಜ್ಯ ಅಂಗ ಮಾಡಿದರು. ಇದು ನಿಜವಾದ ಭಾರತ್ ಜೋಡೋ. ಆದರೆ ಆಗ ಕಾಶ್ಮೀರಕ್ಕೆ ವಿಶೇಷ ರಾಷ್ಟ್ರ ಕೊಟ್ಟವರಾರು? ಅಖಂಡ ಭಾರತ ಇದ್ರೆ ಮೊಹಮ್ಮದ್ ಅಲಿ ಜಿನ್ನಾ ನನಗೆಲ್ಲಿ ಕುತ್ತು ತರ್ತಾನೆ ಅಂತ ನೆಹರೂ ಭಾರತ ವಿಭಜನೆ ಮಾಡಿದರು. ಯಾರು ಭಾರತ ವಿಭಜನೆ ಮಾಡಿದರೋ, ಅವರು ಇಂದು ಭಾರತ ಜೋಡೋಗೆ ಹೊರಟಿರುವುದು ವಿಪರ್ಯಾಸ ಎಂದರು. ಇದನ್ನೂ ಓದಿ: ಜಾನುವಾರುಗಳಿಗೆ ಡಿಕ್ಕಿ – ಕಳೆದ ವಾರ ಆರಂಭವಾಗಿದ್ದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಮುಂಭಾಗ ಜಖಂ
ಹಿಂದುಸ್ಥಾನ ತುಕಡೆ ಕರೆಂಗೆ ಎನ್ನುವ ಕನ್ಹಯ್ಯಲಾಲ್ ನಂತವರು, ಭಾರತ ಭೂಮಿ ಅಪವಿತ್ರಳು, ಅದಕ್ಕೆ ಶೂ ಹಾಕಿಕೊಂಡು ಬರುತ್ತೇನೆ ಎಂದ ಪಾದ್ರಿಯಂತವರು ಈ ಯಾತ್ರೆಯಲ್ಲಿ ಪಾಲ್ಗೊಳ್ತಾರೆ. ಭಾರತವನ್ನು ವಿಭಜನೆ ಮಾಡುವಂತಹ ಇಂತಹ ಅನೇಕ ವಿಚಿತ್ರಕಾರಕರನ್ನು ಭೇಟಿಯಾಗಿ ಆ ಶಕ್ತಿಗಳನ್ನು ಒಗ್ಗೂಡಿಸುವ ಯಾತ್ರೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ಅಂತಹ ಪುಣ್ಯಾತ್ಮನಿಗೆ ನಮ್ಮ ರಾಜ್ಯದ ಇಬ್ಬರು ದೊಡ್ಡ ನಾಯಕರು ಕುಣಿಯುತ್ತಾ ಸಾತ್ ಕೊಡ್ತಿದ್ದಾರೆ ಅಂತ ಡಿಕೆಶಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ ವೇಳೆ ಪತ್ರಕರ್ತರ ಮೇಲೆ ಪೊಲೀಸರಿಂದ ಹಲ್ಲೆ
ವ್ಯಾಪಕ ಪಿಎಫ್ಐ ಸಂಘಟನೆ ಉದ್ಭವ, ರೈಫಲ್ಗಳ ಕಳ್ಳತನ, ಜೀವಂತ ಗುಂಡುಗಳ ಕಳ್ಳತನ ಎಲ್ಲಿ ಆಯಿತೋ ಅಂತಹ ಕೇರಳದಿಂದ ಭಾರತ್ ಜೋಡೋ ಆರಂಭ ಮಾಡಿದ್ದಾರೆ. ಇದು ವಿಪರ್ಯಾಸವೆಂದರು.
ಪಂಚಮಸಾಲಿ 2-ಎ ಮೀಸಲಾತಿ ಬಗ್ಗೆ ಮಾತನಾಡಿದ ಅವರು, ಜಯಬಸವ ಮೃತ್ಯುಂಜಯ ಸ್ವಾಮಿಗಳ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಸರ್ಕಾರ ಸಂವಿಧಾನಾತ್ಮಕವಾಗಿ ನಡೆದುಕೊಳ್ಳಬೇಕು. ಮುಖ್ಯಮಂತ್ರಿಗಳು ಪೂರಕ ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ ಇವತ್ತೇ ಬೇಕು, ನಾಳೆಯೇ ಬೇಕು ಎಂದರೆ ಅದು ಹೇಗೆ ಸಾಧ್ಯ ಎಂದು ಸಿ.ಸಿ ಪಾಟೀಲ್ ಪ್ರಶ್ನಿಸಿದರು.