ಉಡುಪಿ: ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಮಹಿಳೆಯೊಬ್ಬರು ಅಕ್ರಮವಾಗಿ ನಿರ್ಮಿಸಿದ್ದ ಮನೆಯನ್ನು ಇಲಾಖೆಯ ಅಧಿಕಾರಿಗಳು ನೆಲಸಮ ಮಾಡಿದ ಘಟನೆ ಉಡುಪಿಯಲ್ಲಿ ನಡೆದಿದೆ.
ನ್ಯಾಯಾಲಯದ ಆದೇಶದಂತೆ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರ್ದಂಡೆ ಕೊಡಪಟ್ಯ ಬಳಿ ಸುಂದರಿ ಆಚಾರ್ಯ ಎಂಬವರ ಮನೆ ಕೆಡವಲಾಗಿದೆ. ಸ್ಥಳೀಯ ಪಾಂಡುರಂಗ ಹೆಗ್ಡೆ ಎಂಬವರಿಗೆ ಸೇರಿದ ಜಮೀನಿಗೆ ಹೊಂದಿಕೊಂಡು ಇದ್ದ ಲೋಕೋಪಯೋಗಿ ಇಲಾಖೆಯ ಜಮೀನಿನಲ್ಲಿ ಸುಂದರಿ ಆಚಾರ್ಯ ಅವರು ಅಕ್ರಮವಾಗಿ ಮನೆ ನಿರ್ಮಿಸಿದ್ದರು.
ಇದರ ವಿರುದ್ಧ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್ ಮನೆ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.
ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಯವರ ಮಾರ್ಗದರ್ಶನದಂತೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮನೆ ತೆರವುಗೊಳಿಸುವ ಸಂದರ್ಭ ಅಮಾನವೀಯ ಘಟನೆ ನಡೆದಿದೆ. ಮನೆಯಲ್ಲಿ ಒಂಬತ್ತು ತಿಂಗಳ ತುಂಬು ಗರ್ಭಿಣಿಯನ್ನು ಮನೆಯಿಂದ ಹೊರಗೆ ಕಳುಹಿಸಿ ಬೀಗ ಹಾಕಲಾಯಿತ್ತು. ಬಳಿಕ ಮನೆಯನ್ನು ನೆಲಸಮ ಮಾಡಲಾಯ್ತು.
ಈ ಸಂದರ್ಭ ಮನೆಯವರು ಪೊಲೀಸರು ಮತ್ತು ಅಧಿಕಾರಿಗಳ ನಡುವೆ ವಾಗ್ವಾದ, ಅಳು, ಆಕ್ರೋಶ, ಚೀರಾಟ ನಡೆದಿದೆ. ಕಾಲಾವಕಾಶ ನೀಡಿದರೂ ಮನೆ ತೆರವು ಮಾಡಿಲ್ಲ ಎಂಬೂದು ಅಧಿಕಾರಿಗಳ ವಾದವಾಗಿದೆ. ನ್ಯಾಯಾಲಯಕ್ಕೆ, ಪೊಲೀಸರಿಗೆ, ಅಧಿಕಾರಿಗಳಿಗೆ ದೂರು ನೀಡಿದ ಹೆಗ್ಡೆ ಕುಟುಂಬಕ್ಕೆ ಮಾನವೀಯತೆ ಇಲ್ಲ ಎಂದು ನೆಟ್ಟಿಗರು ಆಕ್ರೋಶದಿಂದ ವಿಡೀಯೋವನ್ನು ಶೇರ್ ಮಾಡುತ್ತಿದ್ದಾರೆ.