ಕಾರವಾರ: ಪೆಟ್ರೋಲ್ (Petrol) ಹಾಕಿಸಿಕೊಂಡು ಹಣ ಕೊಡದೇ ಬಂಕ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದ ಪೊಲೀಸ್ (Police) ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ʼಪಬ್ಲಿಕ್ ಟಿವಿʼ (Public Tv) ಮಾಡಿದ ವರದಿಯು ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ತಕ್ಷಣ ಕ್ರಮಕೈಗೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ (Uttara Kannada) ಮುಂಡಗೋಡು ಠಾಣೆ ಪೊಲೀಸ್ ಸಿಬ್ಬಂದಿ ಮಹದೇವ ಓಲೇಕರ್, ಪೆಟ್ರೋಲ್ ಬಂಕ್ ಸಿಬ್ಬಂದಿಯ ಮೇಲೆ ಹಲ್ಲೆ ನೆಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೇಕರ್ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಹಾಕಿದ್ದ ಬಿಜೆಪಿ ಮುಖಂಡ ಮಲ್ಲೇಶ್ ಬ್ಯಾನರ್ ಹರಿದು ಹಾಕಿ ಪತ್ನಿ ರಂಪಾಟ
ಈ ಹಿಂದೆ ಪೆಟ್ರೋಲ್ ಬಂಕ್ನಲ್ಲಿ ಪೆಟ್ರೋಲ್ ಹಾಕಿಸಿ ಹಣ ನೀಡದೇ ಠಾಣೆಗೆ ತೆರಳಿದ್ದ ಇವರಿಗೆ ಬಂಕ್ನ ಸಿಬ್ಬಂದಿ ರಾಘು ಎಂಬಾತ ಕರೆಮಾಡಿ ಹಣ ನೀಡುವಂತೆ ಕೇಳಿದ್ದರು. ಆದರೇ ಹಣ ನೀಡದೇ ಆತನನ್ನು ಠಾಣೆಗೆ ಕರೆಸಿ ಥಳಿಸಿದ್ದರು. ಈ ಕುರಿತು ʻಪಬ್ಲಿಕ್ ಟಿವಿʼ ಜಾಲತಾಣದಲ್ಲಿ ವಿಸ್ತೃತ ವರದಿ ಸಹ ಮಾಡಿತ್ತು.
ಹಲ್ಲೆ ನಡೆದರೂ ದೂರು ದಾಖಲಿಸದೇ ಕೆಲವು ಪತ್ರಕರ್ತರು ಹಾಗೂ ಕೆಲವು ಮುಖಂಡರ ರಾಜಿಸಂಧಾನದ ಮೂಲಕ ಹಣ ನೀಡಿ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು. ಇದಲ್ಲದೇ ಸಚಿವರೊಬ್ಬರ ಮುಂದೆ ಕ್ಷಮೆ ಕೇಳಿಸಿ ಆದ ಘಟನೆಯ ಮಾಹಿತಿ ಹೊರಬರದಂತೆ ನೋಡಿಕೊಳ್ಳಲಾಗಿತ್ತು. ಆದರೆ ಪಬ್ಲಿಕ್ ಟಿವಿಯ ವರದಿ ಆಧರಿಸಿ ಇದೀಗ ಸಿಬ್ಬಂದಿಯನ್ನು ಅಮಾನತು ಮಾಡಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ. ಇದನ್ನೂ ಓದಿ: ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಪೊಲೀಸ್ಗೇ ಚಾಕು ಇರಿದ ಕಿಡಿಗೇಡಿಗಳು