ಗದಗ: ವರನಟ ಡಾ. ರಾಜ್ಕುಮಾರ್ ನಟನೆಯ ಅತ್ಯದ್ಭುತ ಚಿತ್ರ ಬಂಗಾರದ ಮನುಷ್ಯ. ಈ ಚಿತ್ರದ ಸಾಮಾಜಿಕ ಸಂದೇಶ ಹಲವರ ಬದುಕಲ್ಲಿ ಬದಲಾವಣೆ ತಂದಿದೆ. ಹೀಗೆ ಬದಲಾವಣೆ ಕಂಡವರಲ್ಲಿ ನಮ್ಮ ಪಬ್ಲಿಕ್ ಹೀರೋ ಕೂಡ ಒಬ್ಬರು.
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೇರಿ ಗ್ರಾಮದ ನಿವಾಸಿ ರಾಮಣ್ಣ ಬೈರಗೊಂಡ ನಮ್ಮ ಪಬ್ಲಿಕ್ ಹೀರೋ. ನರೇಗಲ್ ಪಟ್ಟಣದಲ್ಲಿ ಸಣ್ಣದೊಂದು ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. 45 ವರ್ಷದ ರಾಮಣ್ಣ, ಬಾಲ್ಯದಿಂದಲೂ ರಾಜಕುಮಾರ್ ಅಭಿಮಾನಿ. 11 ವರ್ಷಗಳಿಂದ ರಾಜ್ ಹುಟ್ಟುಹಬ್ಬ ಹಾಗೂ ಪುಣ್ಯಸ್ಮರಣೆ ಹೆಸರಲ್ಲಿ ಸಾಕಷ್ಟು ಸಮಾಜ ಸೇವೆ ಮಾಡಿಕೊಂಡು ಬಂದಿದ್ದಾರೆ.
ಹಾಲು ವ್ಯಾಪಾರಿಯಾಗಿದ್ದ ರಾಮಣ್ಣ, ಡಾ.ರಾಜ್ ಅಭಿನಯದ “ಬಂಗಾರದ ಮನುಷ್ಯ” ಚಿತ್ರ ನೋಡಿ ತಮ್ಮ ಜೀವನಶೈಲಿಯನ್ನ ಬದಲಿಸಿಕೊಂಡ್ರಂತೆ. ರಾಜ್ ಅವರನ್ನೇ ಮನೆ ದೇವರನ್ನಾಗಿಸಿಕೊಂಡಿರೋ ರಾಮಣ್ಣ, ಈ ಬಾರಿ ಪಾರ್ವತಮ್ಮ ಪುಣ್ಯತಿಥಿಗೆ 101 ಮುತ್ತೈದೆಯರಿಗೆ ಉಡಿ ತುಂಬಿದ್ದಾರೆ. ಇಂತ ರಾಮಣ್ಣ, ನನ್ನ ಮನೆ ಅಥವಾ ಹೋಟೆಲ್ ಗೆ ರಾಜಕುಮಾರ್ ಕುಟುಂಬದವರು ಯಾರಾದ್ರು ಒಂದು ಸಾರಿ ಭೇಟಿ ನೀಡಬೇಕು ಅನ್ನೋದು ಮಹದಾಸೆಯಾಗಿದೆ.
ಇದಕ್ಕಿಂತಲೂ ಮುಖ್ಯವಾಗಿ ಹಾಲಕೇರಿ ಜನರ ಕುಡಿಯುವ ನೀರಿನ ಅನುಕೂಲಕ್ಕಾಗಿ ತಮ್ಮ ಅರ್ಧ ಎಕರೆ ಜಮೀನನ್ನು ಕೆರೆಗೆ ದಾನವಾಗಿ ಕೊಟ್ಟಿದ್ದಾರೆ. ಬಸ್ ನಿಲ್ದಾಣ, ದೇವಸ್ಥಾನ ಸೇರಿದಂತೆ ರಸ್ತೆಬದಿ ಕಾಣಸಿಗೋ ಅನಾಥರು, ಭಿಕ್ಷುಕರಿಗೆ ನಿತ್ಯ ಉಚಿತ ಉಪಾಹಾರ ನೀಡುತ್ತಿದ್ದಾರೆ. ನರೇಗಲ್ ಪಟ್ಟಣಕ್ಕೆ ಬಂದ ಗ್ರಾಮೀಣ ಭಾಗದ ರೈತರು, ವಿದ್ಯಾರ್ಥಿಗಳಿಗೆ 10 ರೂಪಾಯಿಗೆ ಹೊಟ್ಟೆತುಂಬ ಪಲಾವ್ ಕೊಡುತ್ತಿದ್ದಾರೆ.
ಕಾಕತಾಳಿಯ ಎಂಬಂತೆ ರಾಜಕುಮಾರ್ ಹುಟ್ಟಿದ ದಿನ ಹಾಗೂ ನಕ್ಷತ್ರದಂದೇ 2013ರಲ್ಲಿ ರಾಮಣ್ಣರಿಗೆ ಗಂಡು ಮಗು ಜನಿಸಿದ್ದು, ಮುತ್ತುರಾಜ್ ಎಂದು ಹೆಸರಿಟ್ಟಿದ್ದಾರೆ.
https://www.youtube.com/watch?v=V8Jj9RZdMIE