ಬೆಂಗಳೂರು: ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಅವರು ಕಿಡಿಕಾರಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ನೋಟಿಸ್ಗೆ ಪ್ರಿಯಾಂಕ್ ಖರ್ಗೆ ಅವರು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಆರು ಪುಟಗಳ ಸುದೀರ್ಘ ಉತ್ತರ ನೀಡಿರುವ ಪ್ರಿಯಾಂಕ್ ಖರ್ಗೆ ಅವರು ಶುಕ್ರವಾರ ಸಂಜೆ ತಮ್ಮ ಆಪ್ತ ಸಹಾಯಕನ ಮೂಲಕ ಕಳುಹಿಸಿದ್ದಾರೆ. ಜವಾಬ್ದಾರಿಯುತ ನಾಗರಿಕ ಹಾಗೂ ಶಾಸಕ, ಅಲ್ಲದೇ ವಿಧಾನ ಸಭೆ ವಿರೋಧ ಪಕ್ಷದ ಹಿರಿಯ ನಾಯಕನಾಗಿ ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಅಂದು ಕಿತ್ತಾಡಿಕೊಂಡಿದ್ದ ಸಾರಾ ಮಹೇಶ್, ಎಚ್. ವಿಶ್ವನಾಥ್ ಇಂದು ದೋಸ್ತಿಗಳು
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉದ್ದೇಶಪೂರ್ವಕವಾಗಿ ನನ್ನ ಬಾಯಿ ಮುಚ್ಚಿಸಲು ಇದೇ ರೀತಿ ನೋಟಿಸ್ ನೀಡುತ್ತಿದ್ದರೆ ನೀವು ಬಹಳ ತಪ್ಪು ಮಾಡುತ್ತಿದ್ದೀರಾ ಅನ್ನೋದನ್ನು ಅರ್ಥಮಾಡಿಕೊಳ್ಳಿ. ನಿಮಗಿಂತಲೂ ಹೆಚ್ಚು ಕಾನೂನು ಜ್ಞಾನ ನನಗೂ ಇದೆ. ಈ ನೋಟಿಸ್ಗಳ ವಿರುದ್ಧ ನಾನೂ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಹಕ್ಕು ಚ್ಯುತಿ ಮಂಡನೆ, ವಿಜ್ಹಲ್ಬ್ಲೊಯರ್ಸ್ ಪ್ರೊಟೆಕ್ಷನ್ ಆ್ಯಕ್ಟ್ ಸೇರಿದಂತೆ ನನಗಿರುವ ಕಾನೂನು ಆಯ್ಕೆಗಳನ್ನೂ ಬಳಸಬೇಕಾಗುತ್ತದೆ ಎಂದು ಸಿಐಡಿಗೆ ಎಚ್ಚರಿಕೆ ನೀಡಿದ್ದರು.
ಇದೀಗ ಈ ಕುರಿತಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೋಟಿಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ. ಅಕ್ರಮ ನಡೆಸಿದ ಅಭ್ಯರ್ಥಿಗೆ ಎರಡು ಬಾರಿ ನೋಟೀಸ್ ಕೊಡುತ್ತಾರೆ. ನನಗೆ ಮೂರು ಬಾರಿ ನೋಟಿಸ್ ಕೊಡುತ್ತಾರೆ. ಪಿಎಸ್ಐ ಅಕ್ರಮ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆಯುತ್ತಿಲ್ಲ. ಹೀಗಾಗಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಲಿ. ನಾನು ಸಿಐಡಿ ನೊಟೀಸ್ಗೆ ಉತ್ತರ ಕೊಟ್ಟಿದ್ದೇನೆ. ಗೃಹ ಸಚಿವರಿಗೆ ಸೆಕ್ಷನ್ 91 ಏನ್ ಹೇಳುತ್ತದೆ ಅಂತ ತಿಳಿದುಕೊಳ್ಳುವುಕ್ಕೆ ಹೇಳಿದ್ದೇನೆ. ಗೃಹ ಸಚಿವರಿಗೆ ಲೀಗಲ್ ಆಗಿ ಯಾರಾದರೂ ಬೇಕಾದರೆ ಹೇಳಲಿ ನಾನು ವಕೀಲರನ್ನು ಕಳಿಸುತ್ತೇನೆ. ಎಲ್ಲಾ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಆಣೆ ಪ್ರಮಾಣವಾದ 1 ವರ್ಷಕ್ಕೆ ನ್ಯಾಯದೇವತೆಯಿಂದ ವಿಶ್ವನಾಥ್ಗೆ ಶಿಕ್ಷೆ – ಸಾರಾ ಮಹೇಶ್
ರಾಜ್ಯ ಸರ್ಕಾರವನ್ನು ನಡೆಸುತ್ತಿರುವುದು ಸಿಎಂ ಬೊಮ್ಮಯಿ ಅಲ್ಲ. ಕೇಶವ ಕೃಪಾದಿಂದ ಸರ್ಕಾರ ನಡೆಯುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಎಲ್ಲಾ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಇದು ಪರ್ಸೇಂಟೆಜ್ ಸರ್ಕಾರವಾಗಿದ್ದು, ಬಿಜೆಪಿಯವರು ವಿಧಾನ ಸೌಧವನ್ನು ವ್ಯಾಪಾರ ಸೌಧ ಮಾಡಿದ್ದಾರೆ. ಸರ್ಕಾರದಲ್ಲಿ ಅಕ್ರಮ ನಡೆದಿದೆ ಸಾರ್ವಜನಿಕರ ಪರವಾಗಿ ನ್ಯಾಯ ಕೇಳುವುದೇ ತಪ್ಪಾ? ನಾವು 54 ಸಾವಿರ ಅಭ್ಯರ್ಥಿಗಳ ಪರವಾಗಿ ನಿಂತಿದ್ದೇವೆ ಎಂದಿದ್ದಾರೆ.
ಮತ್ತೊಂದೆಡೆ ಗೃಹ ಸಚಿವ ಅರಗ ಜ್ಞಾನೇಂದ್ರ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ ಅವರು, ನನಗೆ ಈಗಾಗಲೇ ಮೂರು ಬಾರಿ ಸಿಐಡಿಯಿಂದ ನೋಟಿಸ್ ನೀಡಿದ್ದೀರಿ. ಅದಕ್ಕೆ ಲಿಖಿತ ರೂಪದಲ್ಲಿ ಉತ್ತರಿಸಿದ್ದೇನೆ. ಬಿಜೆಪಿ ನಾಯಕರಾದ ಸಚಿವ ಪ್ರಭು ಬಿ ಚೌಹಣ್, ಎಸ್. ವಿ. ಸಂಕನೂರ, ಶಶಿಲ್ ಜಿ ನವೊಶಿರವರು ಕೂಡ ಈ ಪ್ರಕರಣ ಸಂಬಂಧ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಹಲವಾರು ಬಿಜೆಪಿ ಮುಖಂಡರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ನನಗೆ ನೋಟಿಸ್ ನೀಡಿ ಮಾಹಿತಿ ಕೋರಿದಂತೆ ಅವರಿಗೂ ನೋಟಿಸ್ ನೀಡಿ ಮಾಹಿತಿ ತೆಗೆದುಕೊಂಡಿದ್ದೀರಾ? ಆರಗ ಜ್ಞಾನೇಂದ್ರ ನೀವು ಕೂಡ ಅಕ್ರಮದ ಬಗ್ಗೆ ಕೆಲವೊಂದು ಗೊಂದಲದ ಹೇಳಿಕೆಗಳನ್ನು ನೀಡಿದ್ದೀರಿ. ನೀವು ಯಾವ ರೀತಿ ಸಿಐಡಿ ತನಿಖೆಗೆ ಸ್ಪಂದಿಸಿದ್ದೀರಿ, ನಿಮ್ಮ ಬಳಿ ಇರುವ ಮಾಹಿತಿಯನ್ನು ಸಿಐಡಿಗೆ ನೀಡಿ ಎಂದು ಒತ್ತಾಯಿಸಿದ್ದಾರೆ.