ಧಾರವಾಡ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸಕ್ಕೆ ಹೋಗಿದ್ದರಿಂದ ಪ್ರವಾಹ ಪರಿಹಾರ ಬಿಡುಗಡೆಯಲ್ಲಿ ತಡವಾಗಿದೆ. ಶೀಘ್ರವೇ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಷಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಲ್ಲಿಯೂ ಪ್ರವಾಹ ಬಂದಿರುವ ಕಾರಣ ವರದಿಗಳು ಈಗ ಸಲ್ಲಿಕೆಯಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಈಗಷ್ಟೇ ಅಮೆರಿಕದಿಂದ ಆಗಮಿಸಿದ್ದಾರೆ. ಶೀಘ್ರವೇ ನೆರೆ ಪರಿಹಾರದ ಹಣ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದರು.
ಬಿಹಾರಕ್ಕೆ ಯಾವುದೇ ನೆರವು ಕೊಟ್ಟಿಲ್ಲ. ಆದರೆ ನೆರವಿನ ಭರವಸೆಯ ಟ್ವೀಟ್ ಮಾಡಿದ್ದಾರೆ ಅಷ್ಟೇ. ಎಲ್ಲ ರಾಜ್ಯಗಳು ವರದಿ ಸಲ್ಲಿಸಬೇಕಾದ್ದರಿಂದ ತಡವಾಗಿದೆ, ಬೇಗ ಹಣ ಬಿಡುಗಡೆಯಾಗುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಬಿಎಸ್ವೈಗೆ ಹಿನ್ನೆಡೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ, ವಿಚಾರಿಸಿ ಹೇಳುತ್ತೇನೆ ಎಂದರು.
ನೆರೆ ಪರಿಹಾರದ ಕುರಿತು ರಾಜ್ಯಾದ್ಯಂತ ಭಾರೀ ಚರ್ಚೆ ನಡೆಯುತ್ತಿದ್ದು, ನಿನ್ನೆಯಷ್ಟೆ ಚಕ್ರವರ್ತಿ ಸೂಲಿಬೆಲೆ ಅವರು 25 ಸಂಸದರು ಏನು ಮಾಡುತ್ತಿದ್ದಾರೆ, ಈ ಕುರಿತು ಪ್ರಧಾನಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದ್ದರು. ಇಂದು ಬಿಹಾರ ಪ್ರವಾಹದ ಕುರಿತು ಮೋದಿ ಟ್ವೀಟ್ ಮಾಡಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ. ರಕ್ಷಣಾ ಕಾರ್ಯ ಸಾಗುತ್ತಿದೆ. ಕೇಂದ್ರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿ, ಬಿಹಾರ ಪ್ರವಾಹದ ಕುರಿತು ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರ 52 ಇಂಚಿನ ಎದೆ ಕರ್ನಾಟಕದ ಪ್ರವಾಹದ ಕುರಿತು ಯಾಕೆ ಕಲ್ಲಾಗಿದೆ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.