ಲಕ್ನೋ: ಉತ್ತರ ಪ್ರದೇಶದಲ್ಲಿ ಈ ಹಿಂದೆ ಇದ್ದ ಸರ್ಕಾರ ಬಡವರಿಗಾಗಿ ಮೀಸಲಾದ ಹಣವನ್ನು ಕಬ್ರಿಸ್ತಾನ್ಗಳಿಗೆ ಬಳಸುವ ಮೂಲಕ ವ್ಯರ್ಥ ಮಾಡಿತ್ತು ಎಂದು ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷವಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾಗ್ದಾಳಿ ನಡೆಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹುಟ್ಟೂರಿನ ಗ್ರಾಮ ಬಟೇಶ್ವರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಹಿಂದಿನ ಸರ್ಕಾರ ತನ್ನ ಆಡಳಿತದ ಅವಧಿಯಲ್ಲಿ ಬಡವರಿಗಾಗಿ ಮೀಸಲಾದ ಹಣವನ್ನು ಕಬ್ರಿಸ್ತಾನ್ (ಸ್ಮಶಾನ)ಗಳಿಗೆ ವ್ಯರ್ಥ ಮಾಡಿತ್ತು. ಅಲ್ಲದೇ ಉರ್ದು ಭಾಷೆ ಗೊತ್ತಿಲ್ಲದವರನ್ನು ಉರ್ದು ಭಾಷಾಂತರಕಾರರನ್ನಾಗಿ ಮಾಡಿತು. ಆದರೆ ಸಂಸ್ಕೃತ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಏನೂ ಮಾಡಿಲ್ಲ ಎಂದು ಹೇಳಿದರು.
ಕಳೆದ ಐದು ವರ್ಷಗಳಿಂದ ಅಧಿಕಾರದಲ್ಲಿ ಇಲ್ಲದಿದ್ದರೂ ಹೊರಗುಳಿದಿದ್ದರೂ 200 ಕೋಟಿ ರೂ. ಖರ್ಚುಮಾಡಿದೆ. ಈ ಹಣ ಎಲ್ಲಿಂದ ಬಂತು? ಅವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಅದನ್ನು ಲೂಟಿ ಮಾಡಿ ಸಂಗ್ರಹಿಸಲಾಗಿದೆ ಎನ್ನಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಜ.3 ರಿಂದ 15 ರಿಂದ 18 ವರ್ಷದ ಮಕ್ಕಳಿಗೆ ಲಸಿಕೆ: ಮೋದಿ
ಮಾಜಿ ಪ್ರಧಾನಿಯವರ ಜನ್ಮ ವಾರ್ಷಿಕೋತ್ಸವ ಪ್ರಯುಕ್ತ ಬಟೇಶ್ವರದಲ್ಲಿ 230 ಕೋಟಿ ರೂಪಾಯಿ ಯೋಜನೆಗಳ ಶಂಕುಸ್ಥಾಪನೆ ಮಾಡಿದ ಯೋಗಿ ಆದಿತ್ಯನಾಥ್ ಅವರು, ಭಾರತೀಯ ಜನತಾ ಪಕ್ಷದ ಸರ್ಕಾರವು ಸಂಸ್ಕೃತ ಶಾಲೆಗಳ ಬಗ್ಗೆ ಕಾಳಜಿ ವಹಿಸಿದೆ ಎಂದರು ಮತ್ತು ಬಟೇಶ್ವರ ಅಭಿವೃದ್ಧಿಗೊಳಿಸುವ ಬಗ್ಗೆ ಜನರಿಗೆ ಭರವಸೆ ನೀಡಿದರು. ಇದನ್ನೂ ಓದಿ: 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ತುರ್ತು ಬಳಕೆಗೆ ಅನುಮತಿ
ಬಿಜೆಪಿ ಸರ್ಕಾರವು ಉತ್ತರ ಪ್ರದೇಶದ ಯುವಕರಿಗೆ ಟ್ಯಾಬ್ಲೆಟ್ಗಳು ಮತ್ತು ಸ್ಮಾರ್ಟ್ಫೋನ್ಗಳನ್ನು ನೀಡುತ್ತಿದೆ. ಇದಲ್ಲದೆ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಹಲವಾರು ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ. ಅವರ ಹೆಸರಿನಲ್ಲಿ ವೈದ್ಯಕೀಯ ಕಾಲೇಜುಗಳು, ವಸತಿ ಶಾಲೆಗಳು ಮತ್ತು ಮಧ್ಯಂತರ ಶಾಲೆಗಳು ತೆರೆಯುತ್ತಿವೆ ಮತ್ತು ವಸ್ತುಸಂಗ್ರಹಾಲಯ, ಸಾಂಸ್ಕೃತಿಕ ಸಂಕೀರ್ಣ ಮತ್ತು ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.