ರಾಮನಗರ: ಜಿಲ್ಲೆಯ ಗ್ರಾಮಾಂತರ ಪೊಲೀಸರು ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ನಡೆಸಿ 10 ಜನರನ್ನು ವಶಕ್ಕೆ ಪಡೆದಿರುವ ಘಟನೆ ರಾಮನಗರ ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ನಡೆದಿದೆ.
ವಿಭೂತಿಕೆರೆ ಗ್ರಾಮದಲ್ಲಿನ ಬೆಂಗಳೂರು ಮೂಲದ ವೆಂಕಟೇಶ್ ಅವರ ಜಮೀನಿನಲ್ಲಿ ತಡರಾತ್ರಿ ಅಬ್ಬರದ ರೇವ್ ಪಾರ್ಟಿಯನ್ನ ನಡೆಸಲಾಗುತ್ತಿತ್ತು. ಸುಮಾರು 500 ಜನ ಕೇರಳ, ತಮಿಳುನಾಡು ಹಾಗೂ ಬೆಂಗಳೂರಿನ ಯುವಕ ಮತ್ತು ಯುವತಿಯರು ಸೇರಿ ಪಾರ್ಟಿ ಮಾಡುತ್ತಿದ್ದರು. ತಡರಾತ್ರಿಯಲ್ಲೂ ಸಹ ಪಾರ್ಟಿ, ಡಿಜೆ ಸೌಂಡ್ ಕೇಳಿದ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಒಂದು ಆಪ್ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಬೆಂಗಳೂರಿನ ಮಧುಮಿತ, ಪೌರಾಣಿಕ್ ಪುರೋಹಿತ್, ನಬಿರಾ, ರಿಚು ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗ್ರಾಮಸ್ಥರು ನೀಡಿದ ಮಾಹಿತಿಯ ಆಧಾರದ ಮೇರೆಗೆ ಪೊಲೀಸರು ರೇವ್ ಪಾರ್ಟಿ ಅಡ್ಡೆ ಮೇಲೆ ದಾಳಿ ಮಾಡಿದ್ದಾರೆ.
ಈ ವೇಳೆ ಮದ್ಯ, ಡಿಜೆ ಬಾಕ್ಸ್ ಗಳು, ಶಾಮಿಯಾನ, ಕ್ಯಾಮೆರಾ ಸೇರಿದಂತೆ ಹಲವು ವಸ್ತುಗಳು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಸುಮಾರು 10 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.