– ಕೋರ್ಟ್ ನಿಂದ ಜಾಮೀನು ಮಂಜೂರು
ಬಳ್ಳಾರಿ: ಕಳ್ಳರನ್ನು ಜೈಲಿಗೆ ಕಳುಹಿಸೋದು ಪೊಲೀಸರ ಕೆಲಸ. ಆದ್ರೆ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಧಾರವಾಡ ಸಂಚಾರಿ ಹೈಕೋರ್ಟ್ ಪೀಠ ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ.
ಬಳ್ಳಾರಿಯ ಕೌಲ್ಬಜಾರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಆರೋಪಿಯೊಬ್ಬರಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ನ್ಯಾಯಾಲಯ ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನೆ ನ್ಯಾಯಾಂಗ ವಶಕ್ಕೆ ನೀಡಿ ಆದೇಶಿಸಿತ್ತು.
ಏನಿದು ಪ್ರಕರಣ?:
ನಗರದ ಕೌಲ್ಬಜಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 36/2010 ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಪ್ರಸಾದ್ ಎನ್ನುವವರಿಗೆ ವಾರೆಂಟ್ ಜಾರಿ ಮಾಡಿತ್ತು. ಅಲ್ಲದೇ ಪ್ರಕರಣ ಆರೋಪಿಯಾಗಿರುವ ದಾದಾಪೀರ್ ಎಂಬುವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ನೀಡಿತ್ತು. ಆದರೆ ಪೊಲೀಸ್ ಇನ್ಸ್ ಪೆಕ್ಟರ್ ಶಫಿವುಲ್ಲಾ ಕಳೆದ ತಿಂಗಳು ಕಾನ್ ಸ್ಟೇಬಲ್ ಒಬ್ಬರನ್ನು ಕಳಹಿಸಿ ನ್ಯಾಯಾಲಯದ ಸೂಚನೆಯನ್ನು ನಿರ್ಲಕ್ಷಿಸಿದ್ದರು.
ಬುಧವಾರ ನ್ಯಾಯಾಲಯದ ಮುಂದೆ ಶಫಿವುಲ್ಲಾ ಹಾಜರಾಗಿದ್ದರು. ಈ ವೇಳೆಯಲ್ಲಿ ಆರೋಪಿಗೆ ವಾರೆಂಟ್ ಜಾರಿ ಮಾಡದ ಪರಿಣಾಮ ಶಫಿವುಲ್ಲಾಗೆ ಛೀಮಾರಿ ಹಾಕಿದ ನ್ಯಾಯಾಧೀಶರು ಪಿಐಗೆ ನ್ಯಾಯಾಂಗ ಬಂಧನ ವಿಧಿಸುವಂತೆ ಆದೇಶ ಮಾಡಿದೆ. ಅಲ್ಲದೇ ಎಸ್ಪಿ ಆರ್.ಚೇತನ್ ಅವರಿಗೂ ಸಹ ನೋಟಿಸ್ ಜಾರಿ ಮಾಡಿ ವಿವರಣೆ ಕೋರಿದೆ.
ನ್ಯಾಯಾಂಗ ವಶಕ್ಕೆ ನೀಡುತ್ತಿದಂತೆ ಶಫಿವುಲ್ಲಾ ಅನಾರೋಗ್ಯದ ಕಾರಣ ನೀಡಿ ಆಸ್ಪತ್ರೆಗೆ ದಾಖಲಾಗಿ, ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.