ದಾವಣಗೆರೆ: ಶ್ವಾನಗಳಿಗೆ (Dog) ಚಿಕನ್ ಪೀಸ್ನಲ್ಲಿ (Chicken Pieces) ವಿಷಪ್ರಾಹಸನ ಮಾಡಿಸಿ ಶ್ರೀಗಂಧದ ಮರ (Sandalwood Tree) ಕದಿಯಲು ಯತ್ನಿಸಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜುನಾಥ್ ಎಂಬುವರ ಮನೆ ಮುಂದೆ ಇದ್ದ ಶ್ರೀಗಂಧದ ಮರ ಕದಿಯೋದಕ್ಕೆ ಬಂದಿದ್ದ ನಾಲ್ವರು ಕಳ್ಳರು (Thief) ಶ್ವಾನಗಳಿಗೆ ಚಿಕನ್ ಪೀಸ್ನಲ್ಲಿ ವಿಷವಿಟ್ಟು ಕೊಂದಿದ್ದಾರೆ. ಅಲ್ಲದೆ ಮಂಜುನಾಥ್ ಅವರ ಮನೆ ಸೇರಿದಂತೆ ಅಕ್ಕಪಕ್ಕದ 10ಕ್ಕೂ ಹೆಚ್ಚು ಮನೆಗಳ ಬಾಗಿಲಿಗೆ ಚಿಲಕ ಹಾಕಿ ಶ್ರೀಗಂಧದ ಮರ ಕತ್ತರಿಸಿದ್ದಾರೆ.
ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ಮರ ನೆಲಕ್ಕೆ ಅಪ್ಪಳಿಸಿದ ಸದ್ದು ಕೇಳಿ ಅಕ್ಕಪಕ್ಕದವರಿಗೆ ಎಚ್ಚರವಾದಾಗ ಮನೆಗಳ ಬಾಗಲಿಗೆ ಚಿಲಕ ಹಾಕಿರೋದು ಗೊತ್ತಾಗಿದೆ. ಆಗ ಜೋರಾಗಿ ಬಾಯಿ ಮಾಡಿದ ಮೇಲೆ ಊರಿನ ಜನ ಹೊರ ಬಂದು ಕಳ್ಳರನ್ನು ಸೆರೆ ಹಿಡಿಯಲು ಯತ್ನಿಸಿದ್ದಾರೆ. ಇದನ್ನೂ ಓದಿ: ಹಾಸನ ಭಾಗದಲ್ಲಿ ಕಾಡಾನೆಗಳ ದಾಳಿಗೆ ಸರಣಿ ಬಲಿ- ವ್ಯಕ್ತಿ ಶವವಿಟ್ಟು ಪ್ರತಿಭಟನೆ
ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಇಬ್ಬರು ಕಾರು ತೆಗೆದುಕೊಂಡು ಪರಾರಿಯಾಗಿದ್ದಾರೆ. ಮರದ ಮೇಲಿದ್ದ ಇಬ್ಬರು ಸುಮಾರು 2 ಕಿಮೀ ಓಡಿ ಹೋಗಿದ್ದಾರೆ. ಗ್ರಾಮದ ಯುವಕರು ಕಳ್ಳರನ್ನು ಬೆನ್ನಟ್ಟಿ ಸೆರೆ ಹಿಡಿದ್ದಾರೆ. ಸೆರೆ ಸಿಕ್ಕ ಇಬ್ಬರು ಕಳ್ಳರ ಪೈಕಿ ಒಬ್ಬ ಚಿಕ್ಕಮಗಳೂರಿನ ಲವಕುಮಾರ್, ಇನ್ನೊಬ್ಬ ತುಮಕೂರಿನ ಇಬ್ರಾನ್ ಎಂದು ಗುರುತಿಸಲಾಗಿದೆ. ಇವರದ್ದು ದೊಡ್ಡ ಗ್ಯಾಂಗ್ ಇದ್ದು, ಹರಿಹರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅತ್ತ ಮೂಕಪ್ರಾಣಿಗಳು ಖದೀಮರ ಕೃತ್ಯಕ್ಕೆ ಜೀವತೆತ್ತಿದೆ. ಇದನ್ನೂ ಓದಿ: ಎಂ.ಪಿ ರೇಣುಕಾಚಾರ್ಯ ಸಹೋದರನ ಪುತ್ರ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ