ಮಂಡ್ಯ: ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ರಾತ್ರಿ ಸಾಕ್ಷಾತ್ ಭಗವಂತನೇ ಧರೆಗಿಳಿದ ಭಕ್ತಿ-ಭಾವ ಮೇಳೈಸಿತ್ತು. ವಿಶ್ವದಲ್ಲಿಯೇ ಪ್ರಸಿದ್ಧವಾದ ವೈರಮುಡಿ ಬ್ರಹ್ಮೋತ್ಸವದ ಸಡಗರ-ಸಂಭ್ರಮ ಎಲ್ಲೆ ಮೀರಿತ್ತು. ಶ್ರೀದೇವಿ-ಭೂದೇವಿಯರೊಂದಿಗೆ ರತ್ನಖಚಿತ ವೈರಮುಡಿ ಕಿರೀಟ ಧರಿಸಿ ಗರುಡಾರೂಢನಾದ ಶ್ರೀಚಲುವನಾರಾಯಸ್ವಾಮಿಯ ದರ್ಶನದಿಂದ ನೆರೆದಿದ್ದ ಜನಸ್ತೋಮ ಪಾವನರಾದರು.
ಅಧಿಕಾರಿಗಳು ಹಾಗೂ ದೇವಸ್ಥಾನದ ಸ್ಥಾನಿಕರು ರಾಜಮುಡಿಯ ಚಿನ್ನಾಭರಣಗಳ ಪಾರ್ಕಾವಣೆ ಮಾಡಿ ದೇವರಿಗೆ ವೈರಮುಡಿಯನ್ನು ಧರಿಸಲಾಯಿತು. ಈ ವೇಳೆ ಯಾಗಶಾಲೆಯಲ್ಲಿ ಹೋಮ ನಡೆಸಿ ಗರುಡ ದೇವರ ಉತ್ಸವ ನಡೆಯುತ್ತಿದ್ದಂತೆ ಮಹಾಮಂಗಳಾರತಿಯೊಂದಿಗೆ ವೈರಮುಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಉತ್ಸವ ದೇವಸ್ಥಾನದಿಂದ ಹೊರಬರುತ್ತಿದ್ದಂತೆ ಹೊರಗೆ ನೆರೆದಿದ್ದ ಲಕ್ಷಾಂತರ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ನೂಕುನುಗ್ಗಲಿನಲ್ಲಿ ಚಲುವನಾರಾಯಣಸ್ವಾಮಿಯ ದರ್ಶನ ಪಡೆದು ಧನ್ಯರಾದರು. ದೇವಾಲಯದ ಮುಖ್ಯದ್ವಾರದಿಂದ ಪ್ರಾರಂಭಗೊಂಡ ಉತ್ಸವ, ಮುಂಜಾನೆವರೆಗೂ ಚತುರ್ವೀದಿಗಳಲ್ಲಿ ವೈಭವದಿಂದ ಸಾಗಿತು. ದಕ್ಷಿಣ ಬದರೀಕಾಶ್ರಮ ಎಂದೇ ಪ್ರಸಿದ್ಧಿ ಪಡೆದ ಮಂಡ್ಯ ಜಿಲ್ಲೆಯ ಈ ಮೇಲುಕೋಟೆಯಲ್ಲಿ ವೈರಮುಡಿ ಬ್ರಹ್ಮೋತ್ಸವ ಶ್ರದ್ಧಾ ಭಕ್ತಿಯಿಂದ ಅದ್ಧೂರಿಯಾಗಿ ನೆರವೇರಿತು. ಕರ್ನಾಟಕವಷ್ಟೇ ಅಲ್ಲದೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳು ಹಾಗೂ ಹೊರ ದೇಶದ ಭಕ್ತರು ಆಗಮಿಸಿ ಗೋವಿಂದ ನಾಮ ಸ್ಮರಣೆ ಮಾಡಿದ್ರು.
ಬೆಟ್ಟದ ಶ್ರೀಯೋಗಾನರಸಿಂಹಸ್ವಾಮಿ ದೇವಸ್ಥಾನದ ರಾಜಗೋಪುರ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿತು. ಇಡೀ ಊರ ಬೀದಿಗಳು ದೀಪಗಳಿಂದ ಜಗಮಗಿಸಿ ಉತ್ಸವದ ರಂಗು ಹೆಚ್ಚಿಸಿತು. ಆದ್ರೆ ಎಲ್ಲಕ್ಕಿಂತ ಮುಖ್ಯವಾಗಿ ಈ ಬಾರಿ ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವದಲ್ಲಿ ಮಳೆಯ ಸಿಂಚನವಾಯ್ತು. ತುಂತುರು ಮಳೆಯಲ್ಲೇ ಭಕ್ತರು ಚಲುವನಾರಾಯಣಸ್ವಾಮಿಯ ದರ್ಶನ ಪಡೆದು ಪುನೀತರಾದ್ರು. ಈ ಮಳೆ ರಾಜ್ಯದಲ್ಲಿ ತಲೆದೋರಿರುವ ಬರಗಾಲ ನೀಗಿ ಸಮೃದ್ಧಿಯನ್ನ ನೀಡಲಿದೆ. ಅದಕ್ಕೆ ಚಲುವನಾರಾಯಣಸ್ವಾಮಿಯ ಆಶಿರ್ವಾದ ಇದೆ ಎಂದು ಭಕ್ತಿಪರವಶರಾದ್ರು.