ಮಂಗಳೂರು: ಸರ್ಕಾರಿ ಕನ್ನಡ ಶಾಲೆಗಳು ಅಂದ್ರೆ ಮೂಗು ಮುರಿಯೋರೆ ಜಾಸ್ತಿ. ತಮ್ಮ ಮಕ್ಕಳು ಇಂಗ್ಲೀಷ್ ಮೀಡಿಯಂನಲ್ಲಿ ಓದಿದ್ರೆ ಜ್ಞಾನ ಹೆಚ್ಚುತ್ತೆ ಅನ್ನೋದು ಪೋಷಕರ ನಂಬಿಕೆ. ಆದರೆ ಮಂಗಳೂರಿನಲ್ಲಿ ಸರ್ಕಾರಿ ಶಾಲಾ ಅಧ್ಯಾಪಕರು ಕನ್ನಡ ಶಾಲೆ ಉಳಿಸೋಕೆ ಹಾಗೂ ಪ್ರತಿಭೆಗಳನ್ನ ಬೆಳೆಸೋಕೆ ಅಂತಾ ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.
ಮಂಗಳೂರಿನ ರಥಬೀದಿಯಲ್ಲಿರುವ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾದ್ರೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ. ಶಿಕ್ಷಕರು ವಿದ್ಯಾರ್ಥಿನಿಯರಿಗಾಗಿ ಈ ಬಂಪರ್ ಆಫರ್ ನೀಡಿದ್ದಾರೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿನಿಯರಿಗೆ ವಿಮಾನದಲ್ಲಿ ಬೆಂಗಳೂರಿಗೆ ಟೂರ್ ಕರೆದುಕೊಂಡು ಹೋಗೋ ಮಾತು ಕೊಟ್ಟಿದ್ದಾರೆ.
ವಿದ್ಯಾರ್ಥಿನಿಯರಲ್ಲಿ ಕಲಿಕೆ ಉತ್ಸಾಹವನ್ನು ಹೆಚ್ಚಿಸುವ ಸಲುವಾಗಿ ಕಳೆದ ವರ್ಷ ಶಿಕ್ಷಕರು ಇಂಥದ್ದೊಂದು ಆಫರ್ ಇಟ್ಟಿದ್ದರು. ಅದು ಫಲಕೊಟ್ಟಿದ್ದು, ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಪಾಸಾಗಿದ್ದರು. ಜೊತೆಗೆ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಗಳಿಸಿ ಮೂವರು ವಿದ್ಯಾರ್ಥಿಗಳು ಜಿಲ್ಲೆಯ ಗಮನ ಸೆಳೆದಿದ್ದರು.
ಖಾಸಗಿ ಶಾಲೆಗಳ ಅಬ್ಬರದ ಎದುರು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸೋಕೆ ಅಧ್ಯಾಪಕರು ಮಾಡ್ತಿರೋ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.