ತುಮಕೂರು: ಜ್ಯೋತಿಷಿಯೊಬ್ಬರ ಸಲಹೆಯಂತೆ ಬಹುಮಾನದ ಮೊತ್ತವನ್ನು ಏರಿಕೆ ಮಾಡಿದಂತೆಯೇ ಕಳೆದು ಹೋಗಿದ್ದ ಗಿಳಿ ಕೆಲವೇ ಗಂಟೆಗಳಲ್ಲಿ ಮಾಲೀಕರ ಕೈ ಸೇರಿದೆ.
ತುಮಕೂರಲ್ಲಿ ಜುಲೈ 16ರಂದು ಮಿಸ್ಸಿಂಗ್ ಆಗಿದ್ದ ಗಿಣಿ ಕೊನೆಗೂ ಮಾಲೀಕರ ಕೈ ಸೇರಿದೆ. ಜಯನಗರದ ಅರ್ಜುನ್, ರಂಜಿತಾ ದಂಪತಿಯ ರುಸ್ತುಮಾ ಎಂಬ ಹೆಸರಿನ ಗಿಳಿಯನ್ನು ಕಳೆದುಕೊಂಡಿದ್ದರು. ಗಿಳಿ ಪತ್ತೆಗಾಗಿ ತುಮಕೂರು ನಗರದ ಬೀದಿ ಬೀದಿ ಸುತ್ತುತ್ತಿದ್ದರು. ಗಿಳಿ ಹುಡುಕಿ ಕೊಟ್ಟರೆ 50 ಸಾವಿರ ಬಹುಮಾನ ನೀಡುವುದಾಗಿ ಕರಪತ್ರ ಹಂಚಿ, ಆಟೋದಲ್ಲಿ ಆನೌನ್ಸ್ ಕೂಡ ಮಾಡಿದ್ದರು. ಆದರೂ ಗಿಳಿ ಸಿಕ್ಕಿರಲ್ಲಿಲ್ಲ. ಇದನ್ನೂ ಓದಿ: ಸುರಕ್ಷತೆ ಮರೆತ ಬಿಎಂಟಿಸಿ – ಕಳ್ಳರ ಅಡ್ಡವಾದ ಬಸ್ಗಳು
ಕೊನೆಗೆ ಗಿಳಿ ಮಾಲೀಕರು ಜ್ಯೋತಿಷಿಗಳ ಮೊರೆ ಹೋಗಿದ್ದರು. ಜ್ಯೋತಿಷಿಗಳು ಬಹುಮಾನದ ಮೊತ್ತವನ್ನು 50 ರಿಂದ 85 ಸಾವಿರಕ್ಕೆ ಏರಿಸಿದರೆ 5-6 ಗಂಟೆಯಲ್ಲಿ ನಿಮಗೆ ಗಿಳಿ ಸಿಗುತ್ತದೆ ಎಂದು ಭವಿಷ್ಯ ಹೇಳಿದ್ದರು. ಅದರಂತೆ ಅರ್ಜುನ ದಂಪತಿ ಬಹುಮಾನ ಮೊತ್ತ 85 ಸಾವಿರಕ್ಕೆ ಏರಿಸಿ ಅನೌನ್ಸ್ ಮಾಡಿದರು. ಕಾಕತಾಳಿಯ ಎಂಬಂತೆ ಹೀಗೆ ಘೋಷಣೆ ಮಾಡಿದ ಕೆಲವೇ ಗಂಟೆಯಲ್ಲಿ ಗಿಳಿ ಪತ್ತೆಯಾಗಿದೆ.
ಬಂಡೇ ಪಾಳ್ಯದ ನಿವಾಸಿಗಳಾದ ಶ್ರೀನಿವಾಸ್ ಮತ್ತು ರಾಮಕೃಷ್ಣ ಎಂಬವರು ಬಸವಾಪಟ್ಟಣದ ಮರದ ಮೇಲಿದ್ದ ಗಿಳಿಯನ್ನು ರಕ್ಷಿಸಿ ಮನೆಯಲ್ಲಿಟ್ಟುಕೊಂಡಿದ್ದರು. ಕಾಣೆಯಾಗಿದ್ದ ಗಿಳಿಯ ಕರಪತ್ರ ನೋಡಿ ಮಾಲೀಕರಿಗೆ ಕಾಲ್ ಮಾಡಿ ಗಿಳಿಯನ್ನು ತಲುಪಿಸಿದ್ದಾರೆ. 85 ಸಾವಿರ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇಷ್ಟು ದಿನ ದುಃಖದಲ್ಲಿದ್ದ ಅರ್ಜುನ ದಂಪತಿ ಮೊಗದಲ್ಲಿ ಈಗ ಸಂತಸ ಮೂಡಿದೆ. ಇಷ್ಟು ದಿನದ ಒಂಟಿಯಾಗಿದ್ದ ಹೆಣ್ಣು ಗಿಳಿ ರಿಸ್ತಾ ಈಗ ಮತ್ತೆ ಜಂಟಿಯಾಗಿ ರುಸ್ತುಮಾ ಜೊತೆ ಡ್ಯುಯೆಟ್ ಹಾಡುತ್ತಿದೆ. ಇದನ್ನೂ ಓದಿ: ಕಸದ ವಾಹನಗಳ ಮೇಲೆ BBMP ನಾಮಫಲಕ ಹಾಕುವಂತಿಲ್ಲ – ಹೆಸರು ಹಾಕಿದ ವಾಹನಗಳ ಮೇಲೆ ಕ್ರಿಮಿನಲ್ ಕೇಸ್