ಜೈಪುರ: ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬಂದ 21 ವರ್ಷದ ಪಾಕಿಸ್ತಾನ ಯುವಕನನ್ನು ಭಾರತದ ಗಡಿ ಭದ್ರತಾ ಪಡೆ (ಬಿಎಸ್ಎಫ್) ವಶಕ್ಕೆ ಪಡೆದುಕೊಂಡಿರುವುದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಮೂಲಕ ಯುವಕ ಭಾರತಕ್ಕೆ ಆಗಮಿಸಿರುವ ಯುವಕ ಸೋಶಿಯಲ್ ಮೀಡಿಯಾ ಮೂಲಕ ಸ್ನೇಹ ಹೊಂದಿದ್ದ ಮುಂಬೈನ ಮಹಿಳೆಯನ್ನು ಭೇಟಿಯಾಗುವ ಸಲುವಾಗಿ ಗಡಿ ದಾಟಿರುವುದಾಗಿ ತಿಳಿಸಿದ್ದಾನೆ. ಯುವಕ ಪಾಕಿಸ್ತಾನದ ಪಂಜಾಬ್ನ ಬಹವಾಲ್ಪುರ ಜಿಲ್ಲೆಯ ನಿವಾಸಿಯಾಗಿರುವುದಾಗಿ ಶ್ರೀಗಂಗಾನಗರದ ಅನುಪ್ಗಢ ಪೊಲೀಸ್ ಠಾಣೆಯ ಠಾಣಾಧಿಕಾರಿ ಫೂಲ್ ಚಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ
ಯುವಕನ ನಿವಾಸ ಪಾಕಿಸ್ತಾನದ ಗಡಿ ಸಮೀಪದಲ್ಲಿದ್ದು, ಮುಂಬೈನಲ್ಲಿ ಮಹಿಳೆಯನ್ನು ಭೇಟಿಯಾಗಲು ಆಗಮಿಸಿರುವುದಾಗಿ ತಿಳಿಸಿದ್ದಾನೆ. ಸದ್ಯ ವಿವಿಧ ಭದ್ರತಾ ಏಜೆನ್ಸಿಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ವಿಚಾರಣೆ ಸಮಿತಿ (ಜೆಐಸಿ)ಯಿಂದ ಯುವಕನನ್ನು ಪ್ರಶ್ನಿಸಲಾಗುವುದು ಎಂದು ಶ್ರೀಗಂಗಾನಗರದ ಪೊಲೀಸ್ ವರಿಷ್ಠಾಧಿಕಾರಿ(ಎಸ್ಪಿ) ಶರ್ಮಾ ಹೇಳಿದ್ದಾರೆ.
ಗಡಿ ಭದ್ರತಾ ಪಡೆ (ಬಿಎಸ್ಎಫ್) ಆತನನ್ನು ವಶಕ್ಕೆ ಮುನ್ನ ಅನುಪ್ಗಢ್ ಸೆಕ್ಟರ್ನಲ್ಲಿ ಗಡಿ ಬೇಲಿಯನ್ನು ದಾಟಿ ಯುವಕ ಭಾರತಕ್ಕೆ ಆಗಮಿಸಿದ್ದನು. ಪ್ರಾಥಮಿಕ ತನಿಖೆಯ ನಂತರ ಬಿಎಸ್ಎಫ್ ಆತನನ್ನು ಅನುಪ್ಗಢ್ ಪೊಲೀಸರ ಕಸ್ಟಡಿಗೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧ ಶಂಕೆ – ಪತ್ನಿಯ ಕತ್ತು ಸೀಳಿ ಕೊಂದ ಪತಿ
ಪ್ರಸ್ತುತ ಯುವಕನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದ್ದು, ಜೆಐಸಿ ವಿಚಾರಣೆಗೆ ಒಳಪಡಿಸಿದ ನಂತರ, ಆತ ಭಾರತದ ವಿರುದ್ಧ ಯಾವುದೇ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆಯೇ ಮತ್ತು ಆತನನ್ನು ಬಂಧಿಸುವ ಅಗತ್ಯವಿದೆಯೇ ಎಂದು ಖಚಿತಪಡಿಸಿಕೊಳ್ಳಲಾಗುವುದು. ಆತನ ಮೇಲೆ ಯಾವುದೇ ಅನುಮಾನ ಇಲ್ಲದಿದ್ದರೆ ಪಾಕಿಸ್ತಾನದ ರೇಂಜರ್ಗಳೊಂದಿಗೆ ಸಮಸ್ಯೆ ಕುರಿತಂತೆ ಮಾತನಾಡಿ ನಂತರ ಬಿಎಸ್ಎಫ್ ಸೂಚಿಸುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.