ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ನಡೆಸ್ತಿರೋ ಅಹೋರಾತ್ರಿ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.
ಬುಧವಾರದಂದು ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ, ನೀಡಿದ ಭರವಸೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ವೇತನ ಹೆಚ್ಚಳವಾಗೋ ತನಕ ಇಲ್ಲಿಂದ ಕದಲಲ್ಲ ಅಂತ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಬೆಳಗ್ಗೆ ಸುಡು ಬಿಸಿಲು, ರಾತ್ರಿಯ ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಮಹಿಳೆಯರು ಫ್ರೀಡಂಪಾರ್ಕ್ ಬಳಿಯ ರಸ್ತೆಯಲ್ಲಿ ಮಲಗಿ ಹೋರಾಟ ತೀವ್ರಗೊಳಿಸಿದ್ದಾರೆ.
ಇವರ ಪ್ರತಿಭಟನೆಗೆ ಬಿಗ್ಬಾಸ್ ವಿನ್ನರ್ ಪ್ರಥಮ್ ಮತ್ತು ನರ್ಸ್ ಜಯಲಕ್ಷ್ಮಿ ಕೂಡ ಸಾಥ್ ನೀಡಿದ್ರು. ಬೇಸರದಲ್ಲಿದ್ದ ಕಾರ್ಯಕರ್ತೆಯರನ್ನ ಪ್ರಥಮ್ ಮಧ್ಯರಾತ್ರಿ ನಗಿಸುವ ಪ್ರಯತ್ನ ಮಾಡಿದ್ರು.
ನಮ್ಮ ಬಾಲ್ಯದ ಜೀವನವನ್ನ, ಈಗ ಸರ್ಕಾರಿ ಶಾಲೆಯಲ್ಲಿ ಯಾರು ಓದ್ತಿದ್ದಾರೆ ಅವರ ಭವಿಷ್ಯವನ್ನ ಸದೃಢಗೊಳಿಸೋದಕ್ಕೆ ಇವರ ಪಾತ್ರ ಬಹಳ ಮಹತ್ವದ್ದು. ಎಲ್ಲಾ ದಾಸೋಹಗಳಲ್ಲಿ ಬಹಳ ಪ್ರಮುಖವಾದ ಪಾತ್ರ ಇವರದ್ದಿರುತ್ತದೆ. ಒಂಚೂರು ವೇತನ ಪರಿಷ್ಕರಣೆ ಮಾಡೋಕಾಗಲ್ಲ ಅಂದ್ರೆ ಹೇಗೆ? ಇವರಿಗೆ ಯಶಸ್ಸು ಸಿಗೋವರೆಗೂ ಜೊತೆಯಲ್ಲಿರಬೇಕು ಅಂತ ನಿರ್ಧರಿಸಿದ್ದೇನೆ. ಇಷ್ಟು ಹೆಂಗಸರು ಬೀದಿಯಲ್ಲಿದ್ದಾರೆ. ಇವರ ಶ್ರಮಕ್ಕೆ, ನೋವಿಗೆ, ಕಷ್ಟಕ್ಕೆ ಪರಿಹಾರ ಸಿಗದಿದ್ರೆ ಖಂಡಿತವಾಗಿಯೂ ಖಂಡಿಸ್ತೀನಿ ಅಂದ್ರು.
ಇದೇ ವೇಳೆ ಮಾತನಾಡಿದ ಜಯಲಕ್ಷ್ಮೀ, ಇವರ ಹೋರಾಟದಲ್ಲಿ ಕೈಜೋಡಿಸಬೇಕೆಂದು ಬಂದಿದ್ದೀನಿ. ನಮ್ಮಂತವರು ಇವರಿಗೆ ಬಂಬಲ ನೀಡಿದ್ರೆ ಸರ್ಕಾರದ ಮೇಲೆ ಒತ್ತಡ ಹೇರೋಕೆ ಸಹಾಯವಾಗುತ್ತೆ. ಇಲ್ಲಿ ಸಾಕಷ್ಟು ಗರ್ಭಿಣಿಯರು ಇದ್ದಾರೆ, ಬಾಣಂತಿಯರು, ಪುಟ್ಟ ಮಕ್ಕಳಿದ್ದಾರೆ. ಅವರ ನಿತ್ಯಕರ್ಮಕ್ಕೆ, ಬಟ್ಟೆ ಬದಲಯಿಸಬೇಕೆಂದರೆ ಎಷ್ಟು ಕಷ್ಟವಾಗುತ್ತಿದೆ. ಇದು ಮುಖ್ಯಮಂತ್ರಿಗಳಿಗೆ ಯಾಕೆ ಅರ್ಥವಾಗ್ತಿಲ್ಲ ಅಂತ ನನಗೆ ಅನ್ನಿಸುತ್ತದೆ. ಅವರು ಇಲ್ಲಿ ಬಂದು ಎಲ್ಲಾ ಹೆಂಗಸರಿಗೆ ಸ್ಪಂದಿಸಿದ್ರೆ ದೊಡ್ಡ ವ್ಯಕ್ತಿಯಾಗ್ತಾರೆ. ಪ್ರತಿ ಸೆಲೆಬ್ರಿಟಿ ಹಾಗೂ ಸಾಮಾನ್ಯ ಜನರು ಇಲ್ಲಿಗೆ ಬಂದು ಪ್ರತಿಭಟನಾಕಾರರಿಗೆ ಬೆಂಬಲಿಸಬೇಕು ಅಂದ್ರು.
ಬುಧವಾರ ಸಭೆಗೆ ನಮ್ಮನ್ನು ಸಿಎಂ ಕರೆದೇ ಇಲ್ಲ. ಸರ್ಕಾರ ನಮ್ಮ ಒಗ್ಗಟ್ಟನ್ನು ಮುರಿಯೋ ಯತ್ನ ಮಾಡ್ತಿದೆ. ಆದ್ರೆ, ಇದು ಫಲಿಸಲ್ಲ. ನಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಹೋರಾಟ ನಿರಂತರ ಅಂತಾ ಅಂಗನವಾಡಿ ನೌಕರರ ಮುಖ್ಯಸ್ಥೆ ವರಲಕ್ಷ್ಮಿ ಸ್ಪಷ್ಪಡಿಸಿದ್ರು.