ಕಾರವಾರ: ಹಿಜಬ್ ವಿರುದ್ಧ ತೀರ್ಪು ಬಂದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಳೆ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲು ತಂಜಿಮ್ ಸಂಘಟನೆ ಮನವಿ ಮಾಡಿದೆ.
ಹೈಕೋರ್ಟ್ನಲ್ಲಿ ಹಿಜಬ್ ವಿರುದ್ಧ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ತಂಜಿಮ್ ಸಂಘಟನೆ ಸ್ವಯಂ ಪ್ರೇರಿತ ಬಂದ್ಗೆ ಮುಸ್ಲಿಂ ವರ್ತಕರಲ್ಲಿ ಮನವಿ ಮಾಡಿದೆ. ಹೀಗಾಗಿ ಭಟ್ಕಳದಲ್ಲಿ ನಾಳೆ ಬಹುತೇಕ ಬಂದ್ ಇರಲಿದೆ. ಇದನ್ನೂ ಓದಿ: ಹಿಜಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್
ಇಂದು ಸ್ವಯಂ ಪ್ರೇರಿತ ಬಂದ್:
ಹಿಜಬ್ ವಿರುದ್ಧ ಹೈಕೋರ್ಟ್ನಲ್ಲಿ ತೀರ್ಪು ಬರುತ್ತಿದ್ದಂತೆ ಭಟ್ಕಳ ನಗರದಲ್ಲಿ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಬೆಳಗ್ಗೆಯಿಂದ ಗಿಜುಗುಡುತಿದ್ದ ಭಟ್ಕಳ ನಗರದ ಮಾರುಕಟ್ಟೆ ಮಾಧ್ಯಾಹ್ನದ ಬಳಿಕ ಖಾಲಿ ಖಾಲಿ ಎನಿಸುತ್ತಿತ್ತು. ಬಹುತೇಕ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದು, ಭಟ್ಕಳ ನಗರದ ಹಳೆ ಬಸ್ ನಿಲ್ದಾಣದಿಂದ ಚೌಕ್ ಬಜಾರ್ವರೆಗಿನ ಬಹುತೇಕ ಮುಸ್ಲಿಂ ವರ್ತಕರಿರುವ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಇದನ್ನೂ ಓದಿ: ಹಿಜಬ್- ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿ
ಪೊಲೀಸರ ಎಚ್ಚರಿಕೆ:
ಕೆಲವೆಡೆ ತೀರ್ಪು ವಿರೋಧಿಸಿ ಮುಸ್ಲಿಂ ವರ್ತಕರು ಸ್ವಯಂ ಪ್ರೇರಿತ ಬಂದ್ ಮಾಡಿರೆ, ಕೆಲವರು ಅಂಗಡಿ ಮುಂಗಟ್ಟನ್ನು ಬಂದ್ ಮಾಡದೇ ತೆರದಿದ್ದರಿಂದ ಕೆಲವು ಮುಖಂಡರು ಬಲವಂತವಾಗಿ ಬಂದ್ ಮಾಡಿಸಿದರು. ಈ ಹಿನ್ನೆಲೆಯಲ್ಲಿ ಭಟ್ಕಳ ನಗರದ ಡಿವೈಎಸ್ಪಿ ಬೆಳ್ಳಿಯಪ್ಪ ಸ್ಥಳಕ್ಕೆ ಆಗಮಿಸಿ ಬಲವಂತವಾಗಿ ಬಂದ್ ಮಾಡಿಸದಂತೆ ಎಚ್ಚರಿಕೆ ನೀಡಿದರು. ಈ ವೇಳೆ ಮುಸ್ಲಿಂ ಮುಖಂಡರು ಹಾಗೂ ಪೊಲೀಸರ ನಡುವೆ ಕೆಲವು ಸಮಯ ಮಾತಿನ ಚಕಮಕಿ ನಡೆಯಿತು.