ಬಳ್ಳಾರಿ: ಕೇವಲ ಮತ ಬ್ಯಾಂಕ್ಗೋಸ್ಕರ ಸಿದ್ದರಾಮಯ್ಯ ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಜಿ ಸಿಎಂ ಮತ್ತು ವಿಪಕ್ಷ ನಾಯಕನ ವಿರುದ್ಧ ಆಕ್ರೋಶ ಹೊರಹಾಕಿದರು.
ಬಿಜೆಪಿ ರಾಜ್ಯ ಎಸ್ಟಿ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇವಲ ಮತ ಬ್ಯಾಂಕ್ಗೋಸ್ಕರ ಸಿದ್ದರಾಮಯ್ಯ ಅವರು ಭಯೋತ್ಪಾದಕರ ಕಾಲು ನೆಕ್ಕುತ್ತಿದ್ದಾರೆ. ಭಿಕ್ಷಾಟನೆ ಮಾಡುವ ಸ್ಥಿತಿಗೆ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಚಿಂತನೆ ರಾವಣನದು. ಅದಕ್ಕೆ ಸಿದ್ದರಾಮಣ್ಣ ಅವರನ್ನು ಓಡಿಸಬೇಕು ಎಂದು ಜನ ನಿಶ್ಚಯ ಮಾಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: PSI ನೇಮಕಾತಿ ಅಕ್ರಮ: 2 ತಿಂಗಳ ಬಳಿಕ ಅಭ್ಯರ್ಥಿ ಶಾಂತಿಬಾಯಿ ಅರೆಸ್ಟ್
ಸಿದ್ದರಾಮಣ್ಣ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ರಾಷ್ಟ್ರೀಯ ಅಧ್ಯಕ್ಷ ಯಾವ ಕಾರಣಕ್ಕೆ ಬೇಲ್ ಮೇಲೆ ಇದ್ದಾರೆ. ನಿಮ್ಮ ರಾಷ್ಟ್ರೀಯ ಮಹಾರಾಜ, ಉಪಾಧ್ಯಕ್ಷರು ರಾಹುಲ್ ಗಾಂಧಿ ಯಾಕೆ ಬೇಲ್ ಮೇಲೆ ಇದ್ದಾರೆ. ರಾಹುಲ್ ಗಾಂಧಿ ಭಾವಾ ರಾಬರ್ಟ್ ವಾದ್ರಾ ಬೇಲ್ ಮೇಲೆ ಇದ್ದಾರೆ. ನಿಮ್ಮ ರಾಜ್ಯದ ಅಧ್ಯಕ್ಷರು ಬೇಲ್ ಅಲ್ಲಿದ್ದಾರೆ, ಈಗ ಚಾರ್ಜ್ ಶೀಟ್ ಬೀಳ್ತಾ ಇದೆ ಎಂದರು.
ಇವರೆಲ್ಲ ಏನು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ? ಇವತ್ತು ಕಾಂಗ್ರೆಸ್ ಸೇರಬೇಕು, ಅಂದ್ರೆ ಅವನ ಮೇಲೆ 50 ಕ್ರಿಮಿನಲ್ ಕೇಸ್ ಇರಬೇಕು. ಭ್ರಷ್ಟರ ಪಾರ್ಟಿ ಕಾಂಗ್ರೆಸ್, ಕ್ರಿಮಿನಲ್ಗಳ ಪಾರ್ಟಿ ಕಾಂಗ್ರೆಸ್, ಉಗ್ರವಾದಿಗಳ ಪಾರ್ಟಿ ಕಾಂಗ್ರೆಸ್ ಎಂದು ಟೀಕಿಸಿದರು.
ಅಲ್ಪ ಸಂಖ್ಯಾತರಿಗೆ ಶಾದಿ ಭಾಗ್ಯ ಕೊಟ್ಟಿರಿ, ಅಲ್ಪ ಸಂಖ್ಯಾತ ಪತ್ರಕರ್ತರಿಗೆ ಲ್ಯಾಪ್ ಟಾಪ್ ಕೊಟ್ಟಿರಿ. ಅಲ್ಪ ಸಂಖ್ಯಾತ ಶಾಲಾ ಮಕ್ಕಳಿಗೆ ಮಾತ್ರ ಪ್ರವಾಸ ಕೊಟ್ಟಿರಿ ಸಿದ್ದರಾಮಣ್ಣ. ಶಾಲೆಯಲ್ಲಿ ಮಕ್ಕಳನ್ನ, ಪತ್ರಕರ್ತರನ್ನ, ಸಮಾಜದಲ್ಲಿ ಸಮುದಾಯವನ್ನ, ಕೊನೆಗೆ ವೀರಶೈವ ಲಿಂಗಾಯತ ಸಮಾಜ ಹೊಡೆಯುವ ಪ್ರಯತ್ನ ಮಾಡಿದ್ರಿ ಎಂದು ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಮೆಂಟಲ್ ಗಿರಾಕಿಯ ರೀತಿ ಆಡಬಾರದು, ಪ್ರಬುದ್ಧವಾಗಿ ಮಾತನಾಡಬೇಕು: ಸಿ.ಟಿ.ರವಿ ವ್ಯಂಗ್ಯ