ಬೆಂಗಳೂರು, ನವದೆಹಲಿ: ದೇಶದಲ್ಲಿ ನೋಟ್ ಬ್ಯಾನ್ ಆಗಿ ಇಂದಿಗೆ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ದೇಶಾದ್ಯಂತ ಕರಾಳ ದಿನ ಆಚರಣೆ ಮಾಡಲು ಮುಂದಾಗಿದೆ.
ರಾಜ್ಯ ಕಾಂಗ್ರೆಸ್ ನಾಯಕರು ಸಹಾ ಬೆಂಗಳೂರಿನಲ್ಲಿ ಕರಾಳ ದಿನ ಆಚರಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ಫ್ರೀಡಂಪಾರ್ಕ್ ವರೆಗೆ ಕಾಂಗ್ರೆಸ್ ನಾಯಕರು ಜಾಥಾ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್,ಎಸ್.ಆರ್.ಪಾಟೀಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಸರ್ಕಾರದ ಬಹುತೇಕ ಸಚಿವರು ಹಾಗೂ ಶಾಸಕರುಗಳು ಪಾಲ್ಗೊಳ್ಳಲಿದ್ದಾರೆ.
ಬಳಿಕ ಫ್ರೀಡಂಪಾರ್ಕ್ ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ. ನೋಟ್ ಬ್ಯಾನ್ ಮಾಡಿ ಒಂದು ವರ್ಷವಾದ ನವೆಂಬರ್ 8 ರಂದು ಜನ ಸಾಮಾನ್ಯರು ನೋಟ್ ಬ್ಯಾನ್ ನಿಂದ ನರಳುವಂತಾಗಿದ್ದು ಸಫರಿಂಗ್ ಡೇ ಆಚರಿಸಲಿದೆ. ರಾಜ್ಯ ಕಾಂಗ್ರೆಸ್ ನಾಯಕರುಗಳು ಸಂಜೆ 6 ಗಂಟೆಗೆ ಬ್ರಿಗೇಡ್ ರಸ್ತೆಯ ವಾರ್ ಮೆಮೋರಿಯಲ್ ನಲ್ಲಿ ಸತ್ತವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ದೇಶದಾದ್ಯಂತ ಸಾವನ್ನಪ್ಪಿದ 150ಕ್ಕೂ ಹೆಚ್ಚು ಜನರಿಗೆ ಮೊಂಬತ್ತಿ ಬೆಳಗಿ ನಮನ ಸಲ್ಲಿಸಲಾಗುತ್ತದೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಪ್ರತಿಭಟನೆ ನಡೆಯಲಿದೆ ಅಂತಾ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ನೋಟ್ ಬ್ಯಾನ್ಗೆ ಆಯ್ತು 365 ದಿನ: ಪಬ್ಲಿಕ್ ಪರೀಕ್ಷೆಯಲ್ಲಿ ಮೋದಿ ಗೆದ್ರಾ? ಸೋತ್ರಾ?
ಇನ್ನು ನೋಟ್ ಬ್ಯಾನ್ ವರ್ಷಾಚರಣೆ ಹಿನ್ನೆಲೆ ದೆಹಲಿ ಪ್ರದೇಶ ಕಾಂಗ್ರೆಸ್ ಮತ್ತು ಎಐಸಿಸಿ ನೇತೃತ್ವದಲ್ಲಿ ಹಲವೆಡೆ ಪ್ರತಿಭಟನೆ ನಡೆಯಲಿದೆ. ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಒಕ್ಕೂಟದಿಂದ ಬೃಹತ್ ಜಾಥಾ ಹಮ್ಮಿಕೊಂಡಿದ್ದು ಸರೋಜಿನಿ ಮಾರುಕಟ್ಟೆಯಿಂದ ಪ್ರಧಾನ ಮಂತ್ರಿ ಕಚೇರಿವರೆಗೂ ಜಾಥಾ ನಡೆಸಲಿದ್ದಾರೆ.
ಜೊತೆಗೆ ದೆಹಲಿ ಪ್ರದೇಶ ಕಾಂಗ್ರೆಸ್ ವತಿಯಿಂದ ಆರ್ಬಿಐ ಮುಂಭಾಗ ಪ್ರತಿಭಟನೆ ಹಾಗೂ ರಾಜೀವ್ ಚೌಕ್ ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ನೋಟ್ ಬ್ಯಾನ್ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಿದ್ದಾರೆ. ಈ ವೇಳೆ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬೀ ಅಜಾದ್ ಸೇರಿದಂತೆ ದೆಹಲಿಯ ಪ್ರಮುಖ ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
https://www.youtube.com/watch?v=p9IUJ0n3kc0
https://www.youtube.com/watch?v=vBwvhMHsHMY