ಹುಬ್ಬಳ್ಳಿ: ಇಲ್ಲಿನ ಗಲಭೆಯ ಹಿಂದೆ ಮೌಲ್ವಿಯೊಬ್ಬರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಗಲಾಟೆಗೂ ಮುನ್ನ ಮೌಲ್ವಿಯೊಬ್ಬರು ಕಮಿಷನರ್ ಅವರ ಇನ್ನೋವಾ ಕಾರಿನ ಮೇಲೆ ಹತ್ತಿ ಭಾಷಣ ಮಾಡಿರುವ ವೀಡಿಯೋ ದೊರಕಿದ್ದು, ಇದು ಗಲಭೆಗೆ ಪ್ರಚೋದನೆ ನೀಡಿರುವ ಭಾಷಣ ಎಂದು ಹೇಳಲಾಗುತ್ತಿದೆ. ಈ ಮೂಲಕ ಕಾರಿನ ಮೇಲೆ ಹತ್ತಿ ಮೌಲ್ವಿ ಕಿಚ್ಚು ಹಚ್ಚಿದ್ರಾ ಎಂಬ ಪ್ರಶ್ನೆ ಇದೀಗ ಹುಟ್ಟಿಕೊಂಡಿದೆ.
ಪೊಲೀಸ್ ಠಾಣೆ ಅನ್ನೋದನ್ನೂ ನೋಡದೇ ಪ್ರಚೋದನೆ ಕೊಟ್ಟಿದ್ದೇ ಇಷ್ಟು ದೊಡ್ಡ ಗಲಾಟೆಗೆ ಕಾರಣ ಅಂತ ಮೇಲ್ನೋಟಕ್ಕೆ ತಿಳಿದುಬಂದಿದೆ. ಈ ಸಂಬಂಧ ಇದೀಗ ಮೌಲ್ವಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೌಲ್ವಿ ಏನು ಹೇಳ್ತಿದ್ರು ಎಂಬುದು ವೀಡಿಯೋದಲ್ಲಿ ಸ್ಪಷ್ಟವಾಗಿಲ್ಲ. ಹುಬ್ಬಳ್ಳಿಯ ದರ್ಗಾವೊಂದರ ಮೌಲ್ವಿ ಎಂದು ಹೇಳಲಾಗುತ್ತಿದ್ದು, ಇವರು ನಿನ್ನೆಯೇ ಹುಬ್ಬಳ್ಳಿಯಿಂದ ನಾಪತ್ತೆಯಾಗಿದ್ದಾರೆ. ಆದರೆ ಮೌಲ್ವಿ ಮಾತ್ರ ಹುಬ್ಬಳ್ಳಿಯಲ್ಲೇ ಅಡಗಿರುವ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೌಲ್ವಿ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಾಟೆಗೆ ಕಾರಣವಾದ ಅಭಿಷೇಕ್ಗೆ 14 ದಿನ ನ್ಯಾಯಾಂಗ ಬಂಧನ
ಒಟ್ಟಿನಲ್ಲಿ ಕಿಡಿಗೇಡಿಯೊಬ್ಬ ಪ್ರಚೋದನಾಕಾರಿ ಪೋಸ್ಟ್ನಿಂದ ಶನಿವಾರ ರಾತ್ರಿ ಉದ್ವಿಗ್ನಗೊಂಡಿದ್ದ ಹುಬ್ಬಳ್ಳಿ ನಗರ ಸಹಜ ಸ್ಥಿತಿಗೆ ಮರಳುತ್ತಿದೆ. ವಿವಾದದ ಕೇಂದ್ರ ಬಿಂದು ಮಸೀದಿ ಕೂಡ ಓಪನ್ ಆಗಿದೆ. ಮುಂಜಾಗ್ರತಾ ಕ್ರಮವಾಗಿ ಪೊಲಿಸರು ಏಪ್ರಿಲ್ 20ರವರೆಗೂ ನಿಷೇಧಾಜ್ಞೆ ಮುಂದುವರಿಸಿದ್ದಾರೆ. ಎಲ್ಲಾ ಕಡೆ ಕಟ್ಟೆಚ್ಚರ ವಹಿಸಿದ್ದಾರೆ. ಗಲಭೆ ಪ್ರಕರಣದ ತನಿಖೆಗೂ ಚುರುಕು ನೀಡಿದ್ದಾರೆ. ಗಲಭೆಗೆ ಸಂಬಂಧಿಸಿ ಹೊಸ ಹೊಸ ವೀಡಿಯೋಗಳು ಬೆಳಕಿಗೆ ಬರುತ್ತಿವೆ. ಇದನ್ನೂ ಓದಿ: ಗೃಹ ಸಚಿವರಿಗೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಆಗಲ್ಲ: ಆರ್.ಧ್ರುವನಾರಾಯಣ್
ಮತ್ತೊಂದೆಡೆ ಸಾಕ್ಷ್ಯಾಧಾರದ ಕೊರತೆ ಹುಬ್ಬಳ್ಳಿ ಪೊಲೀಸರನ್ನು ಇನ್ನಿಲ್ಲದಂತೆ ಕಾಡುತ್ತಿದೆ. 2000ಕ್ಕೂ ಹೆಚ್ಚು ಗಲಭೆಕೋರರ ಪೈಕಿ ಈವರೆಗೂ 89 ಮಂದಿಯನ್ನಷ್ಟೇ ಬಂಧಿಸಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಉಳಿದ ಆರೋಪಿಗಳ ಪತ್ತೆ ಕಷ್ಟವಾಗ್ತಿದೆ. ಯಾಕಂದ್ರೆ ನಗರದಲ್ಲಿನ 48 ಸಿಸಿಟಿವಿ ಕ್ಯಾಮೆರಾಗಳ ಬಳಿ 21 ಅಷ್ಟೇ ಕೆಲಸ ಮಾಡ್ತಿದೆ. ಸಿಸಿ ಕ್ಯಾಮೆರಾಗಳ ನಿರ್ವಹಣೆಯ ಹೊಣೆ ಹೊತ್ತ ವರ್ಟಿಕ್ಸ್ ಎಡವಟ್ಟೇ ಇದಕ್ಕೆ ಕಾರಣ. ಬಂಧಿತ ಆರೋಪಿಗಳನ್ನು ಇಂದು ಹುಬ್ಬಳ್ಳಿಯ ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿ 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈ ವೇಳೆ, ಕೋರ್ಟ್ ಬಳಿ ಆರೋಪಿಗಳು ಪೋಷಕರು ಕಣ್ಣೀರಿಟ್ಟು ಹೈಡ್ರಾಮಾ ಮಾಡಿದ್ದಾರೆ.