ಲಕ್ನೋ: ಆರು ವರ್ಷದ ಬಾಲಕನನ್ನು ಅಪಹರಿಸಿ ಒಂದು ಲಕ್ಷ ರೂ.ಗೆ ಮಾರಾಟ ಮಾಡಿದ್ದ ನರ್ಸ್ ಮತ್ತು ಆಕೆಯ ಪತಿಯನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಜೂನ್ 6 ರಂದು ಆಗ್ರಾದ ಶಾಸ್ತ್ರಿಪುರಂ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರು ವರ್ಷದ ಆರವ್ ಕಾಣೆಯಾಗಿದ್ದ ಬಾಲಕನಾಗಿದ್ದಾನೆ. ಆರವ್ ತಂದೆ ಫತ್ತೇಲಾಲ್ ಮೂಲತಃ ಛತ್ತೀಸ್ಗಢದ ಬಿಲಾಸ್ಪುರ ಜಿಲ್ಲೆಯವರಾಗಿದ್ದು, ಕೂಲಿ ಕಾರ್ಮಿಕರಾಗಿದ್ದಾರೆ. ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಪಕ್ಷಿ ಬಡಿದು ಎಮರ್ಜೆನ್ಸಿ ಲ್ಯಾಂಡಿಂಗ್
ಆರವ್ ತನ್ನ ಎಂಟು ವರ್ಷದ ಸಹೋದರ ರಿತೇಶ್ ಜೊತೆ ಆಗ್ರಾದ ಶಾಸ್ತ್ರಿಪುರಂ ಪ್ರದೇಶದ ಸಿ ಬ್ಲಾಕ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಬಳಿ ಆಟವಾಡುತ್ತಿದ್ದಾಗ ನರ್ಸ್ ಪೂಜಾ ಮತ್ತು ಆಕೆಯ ಪತಿ ಅನಿಲ್ ಅವರನ್ನು ಅಪಹರಿಸಿದ್ದಾರೆ. ನಂತರ ಕಾಣೆಯಾದ ಮಗನಿಗಾಗಿ ಹುಡುಕಾಟ ನಡೆಸಿ ಪೋಷಕರು ಕೊನೆಗೆ ಫತ್ತೇಲಾಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು ಬಾಲಕ ಕಿಡ್ನಾಪ್ ಆದ ಪ್ರದೇಶದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನಿಲ್ ಮತ್ತು ಪೂಜಾ ಸ್ಕೂಟರ್ನಲ್ಲಿ ಆರವ್ನನ್ನು ಕರೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಆವಾಸ್ ವಿಕಾಸ್ ಕಾಲೋನಿಯ ನಿವಾಸಿ ಅನಿಲ್ ಶರ್ಮಾ ಮತ್ತು ಅವರ ಪತ್ನಿ ಪೂಜಾ ಪ್ರಸ್ತುತ ಕಾಸ್ಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಸದ್ಯ ಇಬ್ಬರು ದೆಹಲಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಪಘಾತ- 9 ಮಂದಿ ದುರ್ಮರಣ
ವಿಚಾರಣೆ ವೇಳೆ ಪೂಜಾ ಬಾಲಕನನ್ನು ಕಾಸ್ಗಂಜ್ನಲ್ಲಿರುವ ನೀರಜ್ ದೇವಿಗೆ ಮಾರಾಟ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾಳೆ. ನೀರಜ್ ದೇವಿಗೆ 20 ವರ್ಷಗಳಿಂದ ಮಕ್ಕಳಿಲ್ಲದ ಕಾರಣ ಪೂಜಾ ಅವರಿಗೆ ಮಗುವನ್ನು ಕೊಡಿಸಿದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಹಣದ ಆಮಿಷಕ್ಕೆ ಒಳಗಾಗಿದ್ದ ಪೂಜಾ ಮತ್ತು ಆಕೆಯ ಪತಿ ಅನಿಲ್ ಜೂನ್ 6 ರಂದು ಆರವ್ನನ್ನು ಕಿಡ್ನಾಪ್ ಮಾಡಿ ಮಾರಾಟ ಮಾಡಿದ್ದಾರೆ. ಇದೀಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
=