ಬೆಂಗಳೂರು: ಗೃಹಸಚಿವ ಅರಗ ಜ್ಞಾನೇಂದ್ರ ಮತ್ತು ಅಶ್ವತ್ಥ ನಾರಾಯಣ್ ಅವರ ಮೇಲಿನ ಆರೋಪಕ್ಕೆ ಹುರುಳು, ತಿರುಳು ಯಾವುದೂ ಇಲ್ಲ. ನಿಮ್ಮ ತಟ್ಟೆಯಲ್ಲಿ ಕತ್ತೆ ಸತ್ತುಬಿದ್ದಾಗ ನಮ್ಮ ನೊಣ ಸತ್ತಿದ್ದನ್ನ ಹೇಳಲು ಬರಬೇಡಿ ಎಂದು ಕಾಂಗ್ರೆಸ್ಗೆ ಸಚಿವ ಆರ್.ಅಶೋಕ್ ತಿರುಗೇಟು ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಲ್ಲಕಡೆ ಡಬಲ್ ಇಂಜಿನ್, ಮುಂದೆ ಕರ್ನಾಟಕದಲ್ಲೂ ಡಬಲ್ ಇಂಜಿನ್ ಸರ್ಕಾರ ಬರಲಿದೆ. ಇದರ ಭಯಕ್ಕೆ ಕಾಂಗ್ರೆಸ್ ಹೆದರಿದೆ. ಚುನಾವಣೆ ಬಂದಾಗ ಕಾಂಗ್ರೆಸ್ ಗಿಮಿಕ್ ಮಾಡುತ್ತೆ. ಇದು ಅವರಿಗೆ ರಕ್ತಗತವಾಗಿ ಬಂದಿದೆ. ಕಾಂಗ್ರೆಸ್ ಯಾವುದೇ ಸಾಕ್ಷ್ಯ ಇಲ್ಲದೇ ಆರೋಪ ಮಾಡ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್
ಪಿಎಸ್ಐ ಹಗರಣ ಕಂಡುಹಿಡಿದಿದ್ದೆ ಗೃಹ ಸಚಿವರು. ಕಾಂಗ್ರೆಸ್ ಗೃಹಸಚಿವರನ್ನು ಅಭಿನಂದಿಸಬೇಕಿತ್ತು. ಈಗ ಅವರ ಮೇಲೆಯೇ ಯಾವುದೇ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡಿದ್ದಾರೆ. ಹಿಂದೆ ಬಿಟ್ಕಾಯಿನ್ನಲ್ಲೂ ಹೀಗೆ ಆರೋಪ ಮಾಡಿ ಝೀರೋ ಆಯ್ತು. ಕಾಂಗ್ರೆಸ್ ಸಂತೆ ಭಾಷಣ ಬಿಟ್ಟು ದಾಖಲೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.
ಇದೇ ವೇಳೆ ಸಿಎಂ ಆಗುವುದು ಎಲ್ಲ ಪಕ್ಷ ತೀರ್ಮಾನ ಮಾಡುತ್ತದೆ. ಅಶ್ವತ್ಥ ನಾರಾಯಣ್ ಅವರು ಎಲ್ಲೂ ನಾನು ಸಿಎಂ ಆಗ್ತೀನಿ ಅಂತ ಹೇಳಿಲ್ಲ. ಡಿ.ಕೆ.ಶಿವಕುಮಾರ್ ಹೇಳಿಕೆಯನ್ನು ಅಶ್ವಥ್ ನಾರಾಯಣ ಉಲ್ಲೇಖ ಮಾಡಿದ್ದಾರೆ ಅಂತಾ ಸಮರ್ಥನೆ ಮಾಡಿಕೊಂಡ್ರು. ಎಲ್ಲವೂ ಹೊರಗೆ ಬರಲಿ. ಎಷ್ಟೇ ದೊಡ್ಡವರಾಗಿದ್ದವರೂ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸ್ವಪಕ್ಷೀಯರೇ ದಾಖಲೆ ಕೊಟ್ಟಿದ್ದಾರೆ ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶೋಕ್, ಕುಮಾರಸ್ವಾಮಿ ಕಾಂಗ್ರೆಸ್ಗಿಂತ ಸ್ವಲ್ಪ ಮುಂದೆ ಹೋಗಿ ಟೀಕೆ ಮಾಡ್ತಿದ್ದಾರೆ. ಸ್ವಲ್ಪ ಅವರ ಪಕ್ಷದಲ್ಲಿ ಏನು ಆಗ್ತಿದೆ ಅಂತಾ ನೋಡಿಕೊಳ್ಳಲಿ. ನಮ್ಮ ಪಕ್ಷದ ವಿಚಾರ ನೋಡಿಕೊಳ್ಳಲು ಬಲಾಢ್ಯ ಕೇಂದ್ರದ ನಾಯಕತ್ವ ಇದೆ. ಜೆಡಿಎಸ್, ಕಾಂಗ್ರೆಸ್ನಲ್ಲಿ ವಂಶದ ನಾಯಕತ್ವ ಇದೆ. ವಂಶದ ನಾಯಕತ್ವದಿಂದ ಬಿಜೆಪಿ ಕಲಿಯಬೇಕಾಗಿಲ್ಲ. ವೈಯಕ್ತಿಕ ದ್ವೇಷಗಳು ರಾಜಕೀಯವಾಗಿ ಒಳ್ಳೆಯದಲ್ಲ. ಸೈದ್ದಾಂತಿಕವಾಗಿ ಹೋರಾಟ ಮಾಡಬೇಕು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ ನಿಯೋಗದಿಂದ ರಾಜ್ಯಪಾಲರ ಭೇಟಿ – ಪತ್ರಿಕಾ ದಿನಾಚರಣೆಗೆ ಆಹ್ವಾನ