ಬೆಳಗಾವಿ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಎರಡು ವಾಹನಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಕ್ಯಾಂಟರ್ ವಾಹನದಲ್ಲಿ ಸಿಲುಕಿದ್ದ ಚಾಲಕನನ್ನು ಜೀವಂತವಾಗಿ ಎಸ್ಡಿಆರ್ಎಫ್ ತಂಡದ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ತಾಲೂಕಿನ ಸುವರ್ಣ ವಿಧಾನಸೌಧದ ಹಲಗಾ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕ್ಯಾಂಟರ್ ವಾಹನಗಳ ನಡುವೆ ಅಪಘಾತ ಸಂಭವಿಸಿತು. ಕ್ಯಾಂಟರ್ ವಾಹನದಲ್ಲಿ ಚಾಲಕನೊಬ್ಬ ಎಸ್ಡಿಆರ್ಎಫ್ ತಂಡದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ವಾಹನ ಚಾಲಕನನ್ನು ಜೀವಂತವಾಗಿ ರಕ್ಷಿಸಿದ್ದಾರೆ.
ನಡೆದಿದ್ದೇನು?
ಹಾವೇರಿ ಮೂಲದ ಚಾಲಕ ಭೀಮಪ್ಪ ಶೇಖಪ್ಪ ಕನ್ನಪ್ಪ ಬದುಕುಳಿದವನು. ಈತ ತಡರಾತ್ರಿ ಹಿರೇಬಾಗೆವಾಡಿ ಕಡೆಯಿಂದ ಬೆಳಗಾವಿ ಕಡೆಗೆ ಬರುವಾಗ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಕ್ಯಾಂಟರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ಕ್ಯಾಂಟರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರಡಿ ಚಾಲಕ ಸಿಲುಕಿದ್ದನು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ
ಪ್ರಾಣಾಪಾಯದಲ್ಲಿದ್ದ ಕ್ಯಾಂಟರ್ ವಾಹನ ಚಾಲಕನನ್ನ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತ ಪೊಲೀಸರ ಮಾಹಿತಿ ಮೇರೆಗೆ ಸ್ಥಳಕ್ಕೆ ಎಸ್ಡಿಆರ್ಎಫ್ ತಂಡದ ಸಿಬ್ಬಂದಿ ಆಗಮಿಸಿದರು. ಈ ವೇಳೆ ವಾಹನದಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯನ್ನು ಸತತ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ. ಹಿರೇಬಾಗೆವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.