ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ದೆಹಲಿ ಇಡಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ನ್ಯಾಷನಲ್ ಹೆರಾಲ್ಡ್ ಆರ್ಥಿಕ ವ್ಯವಹಾಗಳಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ವಿಚಾರಣೆಗೆ ಇಡಿ ಸಮನ್ಸ್ ನೀಡಿತ್ತು.
ರಾಹುಲ್ ಗಾಂಧಿ 5 ದಿನಗಳ ವಿಚಾರಣೆ ಎದುರಿಸಿದ್ದರು. ಸೋನಿಯಾಗಾಂಧಿ ಅವರಿಗೂ ವಿಚಾರಣೆ ಬರುವಂತೆ 2 ಬಾರಿ ಸಮನ್ಸ್ ನೀಡಲಾಗಿತ್ತು. ಆದರೆ ಕೋವಿಡ್ ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿನ್ನೆಲೆ ವಿಚಾರಣೆ ಮುಂದೂಡಲು ಸೋನಿಯಾಗಾಂಧಿ ಮನವಿ ಮಾಡಿದ್ದರು. ಇದಕ್ಕೆ ಸಹಕರಿಸಿದ್ದ ಅಧಿಕಾರಿಗಳು ಇಂದಿಗೆ ದಿನಾಂಕ ನಿಗದಿ ಮಾಡಿದ್ದರು. ಇದನ್ನೂ ಓದಿ: ಏನಿದು ನ್ಯಾಷನಲ್ ಹೆರಾಲ್ಡ್ ಕೇಸ್? ಸೋನಿಯಾ ಪಾತ್ರವೇನು?
ಸೋನಿಯಾ ನಿರ್ದೇಶನದಂತೆ ಅಸೋಸಿಯೇಟೆಡ್ ಜರ್ನಲ್ಸ್ ಲಿ. ಯಂಗ್ ಇಂಡಿಯಾ ಖರೀದಿ ನಡೆದಿದೆ. ವ್ಯವಹಾರಗಳ ಪ್ರತಿ ಹಂತದಲ್ಲೂ ಸೋನಿಯಾಗಾಂಧಿ ಉಪಸ್ಥಿತಿ ಇದ್ದು. ರಾಹುಲ್ ಗಾಂಧಿಗೆ ಹಳೆ ವ್ಯವಹಾರಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಸೋನಿಯಾಗಾಂಧಿ ಹೇಳಿಕೆಯಿಂದ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದೆ.
ಕಾಂಗ್ರೆಸ್ ಪ್ರತಿಭಟನೆ:
ಸೋನಿಯಾಗಾಂಧಿ ವಿಚಾರಣೆ ಖಂಡಿಸಿ ದೆಹಲಿ, ಬೆಂಗಳೂರು ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಹುಲ್ ವಿಚಾರಣೆ ವೇಳೆ ನಡೆಸಿದ ಪ್ರತಿಭಟನೆ ಮಾದರಿಯಲ್ಲಿ ಇವತ್ತೂ ಬೀದಿಗಿಳಿಯಲು ಪಕ್ಷ ತೀರ್ಮಾನಿಸಿದೆ. ದೆಹಲಿಯಲ್ಲಿ ಭಾರೀ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ರಾಜ್ಯ ನಾಯಕರು ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ನೇತೃತ್ವದಲ್ಲಿ ಫ್ರೀಡಂಪಾರ್ಕ್ ಬಳಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಬಳಿಕ ರಾಜಭವನ ಮುತ್ತಿಗೆ ಹಾಕಲಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ಎಲ್ಲಾ ಶಾಸಕರು, ಮುಖಂಡರು ಕಡ್ಡಾಯವಾಗಿ ಭಾಗವಹಿಸಬೇಕು ಅಂತ ಕೆಪಿಸಿಸಿ ಸೂಚಿಸಿದೆ. ಹೀಗಾಗಿ ಪ್ರತಿಭಟನೆಯಲ್ಲಿ 3 ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗುವ ಸಾಧ್ಯತೆ ಇದೆ. ಫ್ರೀಡಂಪಾರ್ಕ್ ಸುತ್ತ ಭಾರೀ ಭದ್ರತೆ ನಿಯೋಜಿಸಲಾಗಿದೆ. ಟ್ರಾಫಿಕ್ ಜಾಮ್ ನಿಯಂತ್ರಿಸಲು ಕೂಡ ಸಂಚಾರಿ ಪೊಲೀಸರು ಕೂಡ ಸಜ್ಜಾಗಿದ್ದಾರೆ.