ಚಾಮರಾಜನಗರ: ಸುಳ್ವಾಡಿ ಗ್ರಾಮದ ಮಾರಮ್ಮ ದೇವಾಲಯದ ದುರಂತ ಪ್ರಕರಣವೂ ಹೊಸ ತಿರವು ಪಡೆದುಕೊಂಡಿದ್ದು ಉದ್ಯೋಗ ನೀಡಿದ್ದ ಋಣ ತೀರಿಸಲು ನಾನೇ ವಿಷ ಹಾಕಿದ್ದೇನೆ ಎಂದು ಆರೋಪಿ ದೊಡ್ಡಯ್ಯ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ದೊಡ್ಡಯ್ಯ ಸುಳ್ವಾಡಿ ಮಾರಮ್ಮ ದೇವಾಲಯದ ಸಮೀಪ ಇರುವ ನಾಗರಕೋವಿ ದೇವಸ್ಥಾನದ ಅರ್ಚಕನಾಗಿ ಕೆಲಸ ಮಾಡಿಕೊಂಡಿದ್ದ. ಈತನನ್ನು ಅರ್ಚಕನಾಗಿ ನೇಮಿಸಿದ್ದೆ ಇಮ್ಮಡಿ ಮಹಾದೇವ ಸ್ವಾಮೀಜಿ. 2 ವರ್ಷದ ಹಿಂದೆ ನಾಗರಕೋವಿ ದೇಗುಲದಲ್ಲಿ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಲು ಸ್ವಾಮೀಜಿ ಹೇಳಿದಂತೆ ವಿಷ ಹಾಕಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ. ಇದನ್ನೂ ಓದಿ: 5 ಮಂದಿಯ ಕುತಂತ್ರಕ್ಕೆ 15 ಮಂದಿ ಬಲಿ – ವಿಷ ಪ್ರಸಾದ ಸ್ಫೋಟಕ ಸತ್ಯ ರಿವೀಲ್
ಶುಕ್ರವಾರ ಏನಾಯ್ತು?
ಮಾರಮ್ಮ ದೇಗುಲದ ಅಡುಗೆ ಮಾಡಿದ್ದ ಸ್ಥಳದಿಂದ 100 ಮೀಟರ್ ದೂರದ ಅಂತರದಲ್ಲಿ ಆರೋಪಿ ದೊಡ್ಡಯ್ಯ ತನ್ನ ಯಮಹ ಬೈಕನ್ನು ನಿಲ್ಲಿಸಿದ್ದ. ಬಳಿಕ ಪ್ರಸಾದದಲ್ಲಿ ವಿಷ ಬೆರೆಸಿ ಹೋಗಿದ್ದಾನೆ. ನಂತರ ತನ್ನ ಮೇಲೆ ಅನುಮಾನ ಬಾರದೇ ಇರಲು ಪ್ರಸಾದ ಸೇವಿಸಿದಂತೆ ನಾಟಕವಾಡಿ ಆಸ್ಪತ್ರೆ ಸೇರಿದ್ದ. ಆದರೆ ವೈದ್ಯರ ಪರೀಕ್ಷೆಯ ವೇಳೆ ದೊಡ್ಡಯ್ಯ ದೇಹದಲ್ಲಿ ವಿಷ ಪ್ರಸಾದ ಸೇವಿಸದೇ ಇರುವ ವಿಚಾರ ಬೆಳಕಿಗೆ ಬಂದಿತ್ತು.
ಅಷ್ಟೇ ಅಲ್ಲದೇ ಈತನ ವರ್ತನೆಯ ಬಗ್ಗೆ ಅನುಮಾನಗೊಂಡಿದ್ದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈ ಕೃತ್ಯವನ್ನು ತಾನು ಎಸಗಿದ್ದು ಯಾಕೆ ಎನ್ನುವುದನ್ನು ತಿಳಿಸಿದ್ದಾನೆ.
ಸದ್ಯಕ್ಕೆ ವಿಷಮಿಶ್ರಿತ ಪ್ರಸಾದ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ಇಂದು ಕೊಳ್ಳೇಗಾಲ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ನಾಗದೇವತೆ ದೇವಾಲಯದ ಅರ್ಚಕ ದೊಡ್ಡಯ್ಯ ಪ್ರಮುಖ ಆರೋಪಿಗಳಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv