ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿದ್ದು, ಅರಮನೆ ಆವರಣದಲ್ಲೂ ಮಹಾದೇವನ ಪೂಜೆಯನ್ನು ಜೋರಾಗಿಯೇ ನೇರವೇರಿಸಲಾಯಿತು.
ಅರಮನೆಯ ತ್ರಿನೇಶ್ವರ ಸ್ವಾಮಿ ದೇಗುಲದಲ್ಲಿ ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಹಾಕಿ ಪೂಜೆ ಸಲ್ಲಿಸಲಾಗಿದೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹುಟ್ಟಿದ ದಿನದಂದು ಅರಮನೆಯಿಂದ 11 ಕೆಜಿಯ ಚಿನ್ನದ ಕೊಳಗವನ್ನು ತ್ರಿನೇಶ್ವರ ಸ್ವಾಮಿಗೆ ನೀಡಲಾಗಿದೆ.
ಮುಂಜಾನೆ 5.30 ನಿಮಿಷಕ್ಕೆ ದೇಗುಲದಲ್ಲಿ ಪೂಜಾ ಕೈಂಕರ್ಯ ಶುರುವಾಗಿತ್ತು. ಪಂಚಾಮೃತ, ಮಹಾನ್ಯಾಸಪೂರ್ವಕ ಏಕವಾಹ, ಹಣ್ಣುಗಳಿಂದ ದೇವರಿಗೆ ಅಭಿಷೇಕ ಮಾಡಲಾಯಿತು. ಅಭಿಷೇಕದ ಬಳಿಕ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಯಿತು. ಇತ್ತ ಸರತಿ ಸಾಲಿನಲ್ಲಿ ನಿಂತು ಭಕ್ತರು ಸ್ವಾಮಿಯ ದರ್ಶನ ಮಾಡುತ್ತಿದ್ದಾರೆ. ವರ್ಷಕ್ಕೊಂದು ಬಾರಿ ಮಾತ್ರ ಚಿನ್ನದ ಮುಖವಾಡ ಧರಿಸಿ ಇಲ್ಲಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.