ಮಂಡ್ಯ: ಮೈಸೂರು-ಬೆಂಗಳೂರು ಅವೈಜ್ಞಾನಿಕ ಕಾಮಗಾರಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸುವಂತೆ ಸಂಸದೆ ಸುಮಲತಾ ಅಂಬರೀಶ್ ಒತ್ತಾಯಿಸಿದ್ದಾರೆ.
ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಪತ್ರ ಬರೆದಿರುವ ಸುಮಲತಾ ಇಂದು ಮತ್ತೆ ಸಚಿವ ಕೆ.ಗೋಪಾಲಯ್ಯ ಅವರೊಂದಿಗೆ ದಶಪಥ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿದ್ದಾರೆ. ಮದ್ದೂರಿನ ನಿಡಘಟ್ಟದಿಂದ ಶ್ರೀರಂಗಪಟ್ಟಣದವರಗೆ ಹೆದ್ದಾರಿ ವೀಕ್ಷಣೆ ಮಾಡಿದ್ದು, ಮಳೆಯಿಂದ ಮಂಡ್ಯದಲ್ಲಿ ಸೃಷ್ಟಿಯಾದ ಅವಾಂತರಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಸುಮಲತಾ ಅಂಬರೀಶ್, ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದ್ದಾರೆ. ಸ್ಥಳೀಯ ಶಾಸಕರು ಏನ್ ಬೇಕಾದರೂ ಮಾತನಾಡಲಿ, ನಾನು ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಧ್ವನಿ ಎತ್ತಿದ್ದೇನೆ. ನನ್ನ ಬಿಟ್ಟು ಯಾರು ಧ್ವನಿ ಎತ್ತಿದ್ದಾರೆ ಎಲ್ಲರಿಗೂ ಗೊತ್ತು. ನಾನು ಬೇರೆ ಅವರಿಗೆ ಸಾಬೀತು ಮಾಡುವ ಅಗತ್ಯವಿಲ್ಲ. ನನ್ನ ಬಗ್ಗೆ ಏನು ಬೇಕಾದ್ರು ಮಾತಾನಾಡಿಕೊಳ್ಳಲಿ, ನಾನು ಅದಕ್ಕೆ ಉತ್ತರ ಕೊಡುವ ಅಗತ್ಯವಿಲ್ಲ. ಜನರಿಗೆ ಉತ್ತರ ಕೊಡಬೇಕು ಅಷ್ಟೇ. ರಾಜಕೀಯ ಮಾಡುವವರಿಗೆ ಕಾಮೆಂಟ್ ಮಾಡಲ್ಲ ಎಂದು ಹೇಳಿದ್ದಾರೆ.
ಪ್ರತಾಪ್ಸಿಂಹ ಯಾಕೆ ವಹಿಸಿಕೊಳ್ತಿದ್ದಾರೆ ಗೊತ್ತಿಲ್ಲ: ಹೆದ್ದಾರಿ ಅವೈಜ್ಞಾನಿಕ ಅಲ್ಲ ಎಂಬ ಪ್ರತಾಪ್ ಸಿಂಹ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ ಅವರು, ಯಾರು ಏನ್ ಬೇಕಾದ್ರು ಹೇಳಲಿ, ಸಮಸ್ಯೆಗಳು ಏನ್ ಆಗಿದೆ ಎಂದು ಕಣ್ಣಿಗೆ ಕಾಣುತ್ತಿದೆ, ಸುಳ್ಳು ಹೇಳೋಕೆ ಅಗಲ್ಲ. ಕೆಲವೊಂದು ಕಡೆ ಬಿರುಕು ಬಿಟ್ಟಿದೆ. ರಸ್ತೆಯ ಅಕ್ಕ-ಪಕ್ಕದಲ್ಲಿ ಕುಸಿದಿದೆ. ಕೆಲವೊಂದು ಕಡೆ ಯುಜಿಡಿ ಹಾಗೂ ಅಂಡರ್ ಪಾಸ್ಗಳಲ್ಲಿ ಸಮಸ್ಯೆಯಾಗಿವೆ. ಜನರು ಸುತ್ತಿಕೊಂಡು ಬರಬೇಕಾದ ಸ್ಥಿತಿ ಇದೆ. ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದ್ದು, ಸರಿಪಡಿಸಲು ಜವಾಬ್ದಾರಿ ತೆಗೆದುಕೊಳ್ಳಬೇಕು. ಪ್ರತಾಪ್ ಸಿಂಹ ಈ ಬಗ್ಗೆ ಯಾಕೆ ವಹಿಸಿಕೊಂಡು ಮಾತಾಡುತ್ತಿದ್ದಾರೆ ಗೊತ್ತಿಲ್ಲ, ಯಾಕೆ ಅಂತಾ ಅವರನ್ನೇ ಕೇಳಬೇಕು ಎಂದು ಕುಟುಕಿದ್ದಾರೆ.
ಹೆದ್ದಾರಿಯಲ್ಲಿ ಮಳೆ ಬಂದಾಗ ನೀರು ಹೋಗಲು ದೊಡ್ಡ ಬಾಕ್ಸ್ಗಳನ್ನು ನಿರ್ಮಿಸಲಾಗಿತ್ತು. ಈಗ ಅದರ ಅಳತೆಯನ್ನು ಸಣ್ಣದು ಮಾಡಲಾಗಿದೆ. ಇದ್ರಿಂದ ಮಳೆ ಬಂದಾಗ ಅಪಾರ ಸಮಸ್ಯೆಗಳು ಎದುರಾಗಿವೆ. ಜನರು-ರೈತರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಈ ಸಮಸ್ಯೆಗಳು ನಿಲ್ಲಬೇಕೆಂದು ಇವತ್ತು ಪರಿಶೀಲನೆ ಮಾಡಿದ್ದೇವೆ. ಈ ಬಗ್ಗೆ ನಾವು ಕೇಂದ್ರ ಸರ್ಕಾರದ ಗಮನಕ್ಕೆ ತರುತ್ತೇವೆ. ಹೀಗಾಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದು ಸಮಸ್ಯೆಗಳ ಬಗ್ಗೆ ಹೇಳಿದ್ದೇನೆ, ಮುಂದೆ ನೇರವಾಗಿ ಭೇಟಿಯಾಗಿ ಹೇಳುತ್ತೇನೆ ಎಂದಿದ್ದಾರೆ.