ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ನನ್ನನ್ನು ಅನರ್ಹ ಮಾಡಿದ್ದಕ್ಕೆ ಒಂದು ಸಾಸಿವೆ ಕಾಳಷ್ಟೂ ನೋವಾಗಿಲ್ಲ ಎಂದು ಅನರ್ಹ ಶಾಸಕ ಮುನಿರತ್ನ ಹೇಳಿದ್ದಾರೆ.
ಪಬ್ಲಿಕ್ ಟಿವಿ ಸಂದರ್ಶನದ ವೇಳೆ, ನನ್ನ ಕ್ಷೇತ್ರದ ಅಭಿವೃದ್ಧಿಯಾಗಿ ಯಾವ ಪಾರ್ಟಿಗಾದರೂ ನಾನು ಹೋಗುತ್ತೇನೆ. ರಾಜಕೀಯದಲ್ಲಿ ಯಾರ ಮಾತನ್ನು ತೆಗೆದುಕೊಳ್ಳಬಾರದು. ಅಭಿವೃದ್ಧಿಗಾಗಿ ಯಾರು ಕರೆದರೂ ಹೋಗುತ್ತೇವೆ ಎಂದು ಎಂದು ತಿಳಿಸಿದರು.
ಅನರ್ಹಗೊಳಿಸಿರುವುದಕ್ಕೆ ಬೇಸರ, ದುಃಖ, ಟೆನ್ಶನ್ ಯಾವುದು ಆಗಿಲ್ಲ. ನನಗೆ ಒಂದು ಸಾಸಿವೆ ಕಾಳಷ್ಟೂ ನೋವು ಇಲ್ಲ. ಕೆಲಸ ಮಾಡದೇ ಸಾಯುವುದಕ್ಕಿಂತ ಅದರಿಂದೀಚೆಗೆ ಬಂದು ನೆಮ್ಮದಿ ಜೀವನ ಮಾಡೋಣ. ಅಲ್ಲಿದ್ದು ಜನರಿಗೆ ಮೋಸ ಮಾಡುವ ಬದಲು ಅಲ್ಲಿಂದೀಚೆಗೆ ಬಂದು ನಮ್ಮ ಕೆಲಸ ನಾವು ಮಾಡಿಕೊಂಡು ಇರೋಣ. ಜನರ ಮಧ್ಯೆ ಇದ್ದುಕೊಂಡು ಸುಳ್ಳು ಹೇಳಿಕೊಂಡು ಇರುವುದು ಬೇಡ. ಈಗ ತೃಪ್ತಿ ಇದೆ ಎಂದರು.
ಈ ರಾಜೀನಾಮೆ ಕೊಡುವುದು, ಮುಂಬೈನಲ್ಲಿ ಅತೃಪ್ತ ಶಾಸಕರು ಇರುವುದು, ಅನರ್ಹ ಮಾಡಿರುವುದು ಇದೆಲ್ಲಾ ಬೇಕಿತ್ತಾ ಎಂದಿದ್ದಕ್ಕೆ, ಪ್ರತಿಯೊಬ್ಬರಿಗೂ ಬೇಕಿತ್ತು. ನಾನು ಹಿರಿಯ ಮುಖಂಡರು ಎಂದು ಯಾರು ಅಂದುಕೊಳ್ಳುತ್ತಾರೆ ಅವರಿಗೆಲ್ಲ ಬೇಕಿತ್ತು. ಕಿರಿಯ ಮುಖಂಡರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದರೆ ಏನಾಗುತ್ತದೆ ಎಂಬುದು ಎಲ್ಲರಿಗೂ ತಿಳಿಯಬೇಕಿತ್ತು. ಹೀಗಾಗಿ ಇದೆಲ್ಲ ಬೇಕಿತ್ತು ಎಂದು ಸ್ಪಷ್ಟಪಡಿಸಿದರು.