ಹಾವೇರಿ: ಕೆಲವು ದಿನಗಳ ಹಿಂದೆ ಸುರಿದ ಮಳೆಗೆ (Rain) ಮನೆ ಕುಸಿದು ಬಿದ್ದಿದೆ. ಇತ್ತ ಸೂರಿಲ್ಲದೆ ಪರದಾಡಿದ ತಾಯಿ (Mother), ಮಗ (Son) ಮನೆ ಬಿದ್ದಿದೆ ಎಂದು ಸ್ಥಳೀಯಾಡಳಿತಕ್ಕೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅವರಿಗೆ ಸೂಕ್ತ ಪರಿಹಾರ ದೊರಕಿಸಿಕೊಟ್ಟಿಲ್ವಂತೆ. ಹೀಗಾಗಿ ನಮಗೆ ಸೂಕ್ತ ಪರಿಹಾರ ಕೊಡಿಸಿ ಇಲ್ಲವೆ ದಯಾಮರಣ (Euthanasia) ಕೊಡಿ ಎಂದು ತಾಯಿ ಮತ್ತು ಮಗ ರಾಷ್ಟ್ರಪತಿಗಳಿಗೆ (President) ಪತ್ರ ಬರೆದಿರುವ ಘಟನೆ ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ವರದಿಯಾಗಿದೆ.
ಹಾವೇರಿ ತಾಲೂಕಿನ ಹೊಸಳ್ಳಿ ಗ್ರಾಮದ ಶಾಂತವ್ವ ನಿಂಬಕ್ಕನವರ ಮತ್ತು ಮಗ ಪ್ರಕಾಶ್ ನಿಂಬಕ್ಕನವರ ಮನೆ ಕಳೆದುಕೊಂಡು ಕಚೇರಿಯಿಂದ ಕಚೇರಿ ಪರಿಹಾರಕ್ಕಾಗಿ ಅಲೆದಾಡಿ ಬೇಸತ್ತು ದಯಾಮರಣಕ್ಕೆ ಅರ್ಜಿ ಹಾಕಿರುವ ನೊಂದ ಜೀವಗಳು. ಇವರಿಗೆ ವಾಸಕ್ಕೆ ಅಂತಾ ಒಂದು ಮನೆ ಇತ್ತು. ಜೀವನೋಪಾಯಕ್ಕೆ ಅಂತಾ ಒಂದು ಎಕರೆ ಜಮೀನಿದೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಮನೆ ಕುಸಿದು ಬಿದ್ದಿದೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳೆಲ್ಲವೂ ಸಂಪೂರ್ಣ ನಾಶವಾಗಿದೆ. ಇದನ್ನೂ ಓದಿ: ಅನಾರೋಗ್ಯದ ಮಗುವಿದ್ರೆ ಲೈಫ್ ಎಂಜಾಯ್ ಮಾಡಲು ಸಾಧ್ಯವಿಲ್ಲ – ವೈದ್ಯೆ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಮನೆ ಕೂಡಾ ನಿರಂತರ ಮಳೆಗೆ ಸಂಪೂರ್ಣವಾಗಿ ಬಿದ್ದು ಹೋಗಿದೆ. ಕಳೆದ ಮೂರು ತಿಂಗಳಿನಿಂದ ಮೂರು ಬಾರಿ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ‘ಸಿ’ ವರ್ಗಕ್ಕೆ ಹಾಕಿ 50 ಸಾವಿರ ರೂ. ಪರಿಹಾರದ ಆದೇಶ ಹೊರಡಿಸಿದ್ದಾರೆ. ಮನೆ ಸಂಪೂರ್ಣ ಬಿದ್ದು ಹೋಗಿದೆ. ಅದರೂ ತಾರತಮ್ಯ ಮಾಡುತ್ತಿದ್ದಾರೆ. ಇದರಿಂದ ನೊಂದು ತಾಯಿ, ಮಗ ಜಿಲ್ಲಾಧಿಕಾರಿ ಹಾಗೂ ರಾಷ್ಟ್ರಪತಿಗೆ ದಯಾಮರಣ ನೀಡಿ ಎಂದು ಪತ್ರವನ್ನು ಬರೆದಿದ್ದಾರೆ. ನಮಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂ. ನೀಡಿ ಇಲ್ಲದಿದ್ದರೆ ದಯಾಮರಣ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಆರೋಪ – ಎಲ್ಲ ಮಾದರಿಯ ಕ್ರಿಕೆಟ್ನಿಂದ ದನುಷ್ಕ ಅಮಾನತು
ಕಳೆದ ಮೂರು ತಿಂಗಳಿನಿಂದ ಮನೆ ಇಲ್ಲದೆ, ಅಲ್ಲಿ ಇಲ್ಲಿ ಇದ್ದು ಜೀವನ ಮಾಡುತ್ತಿದ್ದೇವೆ. ಗ್ರಾಮ ಪಂಚಾಯತ್ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರನ್ನು ಕೇಳಿದರೆ ಜಿಲ್ಲಾಡಳಿತ ಹಾಗೂ ತಹಶೀಲ್ದಾರ್ ಕಡೆ ತೋರಿಸುತ್ತಾರೆ. ಸಂಪೂರ್ಣವಾಗಿ ಬಿದ್ದ ಮನೆಯನ್ನು ‘ಸಿ’ ಕೆಟಗರಿಗೆ ಸೇರಿಸಿ 50 ಸಾವಿರ ರೂ. ಪರಿಹಾರ ನೀಡಿದ್ದಾರೆ. ನಮಗೆ ಸರ್ಕಾರದ ಹಣ ಬೇಡ. ನಮಗೆ ಮನೆ ಕಟ್ಟಿಸಿಕೊಡಿ ಸಾಕು. ಕಚೇರಿಯಿಂದ ಕಚೇರಿಗೆ ಅಧಿಕಾರಿಗಳಿಂದ ಅಧಿಕಾಗಳ ಬಳಿ ಹೋಗಿ ಸಾಕಾಗಿದೆ. ನಿಜವಾದ ಫಲಾನುಭವಿಗಳಿಗೆ ಮನೆ ಮಂಜೂರು ಮಾಡುತ್ತಿಲ್ಲ. ಹೀಗಾಗಿ ನೊಂದು ದಯಾಮರಣ ಅರ್ಜಿಯನ್ನು ಹಾಕಿದ್ದೇವೆ. ನಮಗೆ ನ್ಯಾಯ ಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ಶಾಂತವ್ವ ಅಂಗಲಾಚಿದ್ದಾರೆ.