ಸದ್ಯ ರಾಜಕಾರಣದಲ್ಲಿ ಬ್ಯುಸಿಯಾಗಿರುವ ನಟ ನಿಖಿಲ್ ಕುಮಾರಸ್ವಾಮಿ, ವಿಧಾನಸಭಾ ಚುನಾವಣೆ ಮುಗಿಯುವ ತನಕ ಸಿನಿಮಾ ರಂಗದ ಬಗ್ಗೆ ಯೋಚನೆ ಕೂಡ ಮಾಡುವುದಿಲ್ಲ ಎನ್ನಲಾಗಿತ್ತು. ರಾಜ್ಯ ಸುತ್ತಿ ಸಂಘಟನೆ ಮಾಡುವ ಜವಾಬ್ದಾರಿಯನ್ನು ಅವರೂ ಹೊತ್ತುಕೊಂಡಿದ್ದರಿಂದ ಯದುವೀರ ಸಿನಿಮಾದ ಚಿತ್ರೀಕರಣದಲ್ಲಿ ಅವರು ಭಾಗಿ ಆಗುತ್ತಿಲ್ಲ ಎಂದೂ, ಹೀಗಾಗಿಯೇ ಯದುವೀರ ಸಿನಿಮಾ ಶುರುವಾಗಲಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಯದುವೀರ ಸಿನಿಮಾದ ಶೂಟಿಂಗ್ ಮುಂದೂಡಿದ್ದರಿಂದ, ನಿಖಿಲ್ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಈ ಚಿತ್ರಕ್ಕೆ ನಂದಕಿಶೋರ್ ನಿರ್ದೇಶಕರು. ನಂದಕಿಶೋರ್ ಮತ್ತು ನಿಖಿಲ್ ಕಾಂಬಿನೇಷನ್ ನಲ್ಲಿ ಸಿನಿಮಾವೊಂದು ಮೂಡಿ ಬರಲಿದೆ ಎನ್ನುವ ಸುದ್ದಿಯಿತ್ತು. ನಂದಕಿಶೋರ್ ಹೇಳಿದ್ದ ಕಥೆಯನ್ನು ನಿಖಿಲ್ ಒಪ್ಪಿಕೊಂಡಿದ್ದಾರೆ ಎಂದೂ ಹೇಳಲಾಗಿತ್ತು. ಅದೀಗ ನಿಜವಾದಂತೆ ಕಾಣುತ್ತಿದೆ. ಸದ್ಯದಲ್ಲೇ ಈ ಜೋಡಿಯ ಸಿನಿಮಾದ ಕುರಿತು ಹಲವು ಸಂಗತಿಗಳು ಬಹಿರಂಗವಾಗಲಿವೆಯಂತೆ. ಇದನ್ನೂ ಓದಿ:`ವಿಕ್ರಾಂತ್ ರೋಣ’ ಚಿತ್ರದ ನಂತರ ಹೊಸ ಸಿನಿಮಾಗೆ ಕಿಚ್ಚ ಸುದೀಪ್ ಗ್ರೀನ್ ಸಿಗ್ನಲ್
ನಂದಕಿಶೋರ್ ಮತ್ತು ನಿಖಿಲ್ ಕಾಂಬಿನೇಷನ್ ಚಿತ್ರಕ್ಕೆ ಮಾನ್ ಸ್ಟರ್ ಎಂದು ಹೆಸರಿಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ದಿಲ್ಲದೇ ಪ್ರಿಪ್ರೊಡಕ್ಷನ್ ಕೆಲಸಗಳನ್ನೂ ಮಾಡಿ ಮುಗಿಸಿದ್ದಾರಂತೆ ನಿರ್ದೇಶಕರು. ಈಗಷ್ಟೇ ರಾಣಾ ಸಿನಿಮಾದ ಶೂಟಿಂಗ್ ಮುಗಿಸಿರುವ ನಂದಕಿಶೋರ್, ಇದೀಗ ಮಾನ್ ಸ್ಟರ್ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರಂತೆ.