ಮಂಡ್ಯ: ಸಂಸದೆ ಸುಮಲತಾ( Sumalatha ) ಹೇಳಿದ ದಿನ ನಾನು ಆಣೆ ಮಾಡಲು ಸಿದ್ಧನಿದ್ದೇನೆ ಎಂದು ಜೆಡಿಎಸ್ ಶಾಸಕ ಸಿ.ಎಸ್. ಪುಟ್ಟರಾಜು( Puttaraju )ಅವರು ಮೇಲುಕೋಟೆ ಸನ್ನಿಧಿಯಲ್ಲಿ ನಿಂತು ಸಂಸದೆ ಹಾಕಿದ್ದ ಸವಾಲನ್ನು ಸ್ವೀಕರಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ ಸುಮಲತಾ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡುವುದಕ್ಕೆ ಆಗಿದೆ. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಗೆದ್ದಿದ್ದಾರೆ. ಆದರೆ ಸುಮಲತಾರ ಟಾರ್ಗೆಟ್ ಜೆಡಿಎಸ್ ಆಗಿದೆ. ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುತ್ತೇನೆ ಎಂದುಕೊಂಡಿದ್ದಾರೆ ಎಂದ ಅವರು, ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಎಂದು ಇತಿಹಾಸ ತೆಗೆದು ನೋಡಲಿ. ಗೌರವದಿಂದ ರಾಜಕಾರಣ ಮಾಡಿ ಎಂದರು.
ನನ್ನ ವ್ಯಕ್ತಿತ್ವ ಅಂಬರೀಶ್ ಅವರಿಗೆ ಗೊತ್ತಿತ್ತು. ಅಂಬರೀಶ್ ಹಾಗೂ ನನ್ನ ಸಂಬಂಧ ಎಂತದ್ದು ಎನ್ನುವುದನ್ನು ರಾಕ್ಲೈನ್ ಕೇಳಿ. ಅಂಬಿ ಅವರ ಕಡೆ ದೀಪಾವಳಿಯನ್ನು ನಾನು ಅವರ ಜೊತೆಗೆ ಆಚರಿಸಿದ್ದೆ. ಅಂಬರೀಶ್ ಕುಟುಂಬ ಸೇರಿದಂತೆ ಜಿಲ್ಲೆಯ ಎಲ್ಲಾ ರಾಜಕಾರಣಿಗಳು ಮುಡಾ ಸೈಟ್ ಪಡೆದಿದ್ದಾರೆ. ಈ ವಿಚಾರವಾಗಿ ನನ್ನ ವಿರುದ್ಧ ಕೋರ್ಟ್ ಕೇಸ್ ಇದೆ ಎಂದು ಹೇಳಿದರು. ಇದನ್ನೂ ಓದಿ: ಮೇಲುಕೋಟೆಯಲ್ಲಿ ಆಣೆ ಮಾಡಿ – ಜೆಡಿಎಸ್ ಶಾಸಕರಿಗೆ ಸುಮಲತಾ ಸವಾಲು
ಜನಪ್ರತಿನಿಧಿಗಳ ನ್ಯಾಯಾಲಯ ಹೊರದೇಶಕ್ಕೆ ಹೋಗುವುದಾದರೆ ಅನುಮತಿ ಪಡೆಯುವಂತೆ ಹೇಳಿದೆ. ನನ್ನ ದಂತ ಚಿಕಿತ್ಸೆಗೆ ವಿದೇಶಕ್ಕೆ ಹೋಗಲು ಅನುಮತಿ ಕೇಳಿದ್ದೆ. ದಾಖಲೆಗಳಿದ್ರೆ ತರಲಿ, ಅವರ ವಿರುದ್ಧ ನಮ್ಮ ಬಳಿಯೂ ದಾಖಲೆಗಳಿವೆ. ಅವರ ಕುಟುಂಬವೂ ಮುಡಾ ಸೈಟ್ ಪಡೆದಿದೆ. ಚುನಾವಣೆ ಬಂದಾಗಲೆಲ್ಲಾ ಈ ಸೈಟ್ ವಿಚಾರ ತೆಗೆಯುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಇದು ದೊಡ್ಡ ಷಡ್ಯಂತ್ರವಾಗಿದ್ದು, ಚೆಲುವನಾರಾಯಣನ ಸನ್ನಿಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮುಡಾ ಸೈಟ್ ಹಗರಣದಲ್ಲಿ ನಮ್ಮ ಎಳ್ಳಷ್ಟೂ ಪಾತ್ರವಿಲ್ಲ. ನ್ಯಾಯಾಲಯದಲ್ಲಿ ನಮ್ಮ ಪರ ತೀರ್ಪು ಬರಲಿದೆ. ಅಜಾತ ಶತ್ರು ಅಂಬರೀಶ್(Ambareesh) ಅಣ್ಣನ ನೆನೆದು ಸುಮಲತಾ ಕೆಲಸ ಮಾಡಲಿ. ಲಘು ಮಾತು ಅವರಿಗೆ ಶೋಭೆ ತರುವುದಿಲ್ಲ. ನನ್ನ ದುಡಿದ ಹಣದಿಂದ ನನ್ನ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ನಾನು ಕಳೆದಿದ್ದೆ ಹೆಚ್ಚು. ಅವರ ಬಳಿ ದಾಖಲೆಗಳಿದ್ದರೆ, ದಿನಾಂಕ ನಿಗದಿ ಮಾಡಲಿ. ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ ನಿವಾಸದ ಬಳಿಯಿರುವ ಪಿಜಿಯಲ್ಲಿ ಲ್ಯಾಪ್ಟಾಪ್ ಕಳವು!
ನಾನು ಅಧಿಕಾರಕ್ಕೆ, ಕಮಿಷನ್ಗೆ ಆಸೆ ಪಟ್ಟಿದ್ದರೆ ಕ್ಷೇತ್ರದಲ್ಲಿ ಉಳಿಯಲು ಸಾಧ್ಯವಿರಲಿಲ್ಲ. ಮೈಶುಗರ್ ಕಾರ್ಖಾನೆ ಪುನಾರಂಭ ಬಗ್ಗೆ ರೈತರು ಧರಣಿ ಮಾಡಿದರು. ಆದರೆ ಯಾರು ಯಾರಿಗೆ ಕಾರ್ಖಾನೆ ಮಾರಲು ಹೋಗಿದ್ರು ಅನ್ನೋದು ಗೊತ್ತಿದೆ. ಕೆಆರ್ಎಸ್(KRS) ಬಿರುಕು ಚರ್ಚೆ ಬಂದಾಗ ಅಕ್ರಮ ಗಣಿಗಾರಿಕೆ ನಿಲ್ಲಿಸಿದ್ದು ಮೊದಲು ನಾನು. ಯಾರ್ಯಾರ ಬಂಡವಾಳ ಏನೇನು ಅನ್ನೋದು ಗೊತ್ತಿದೆ ಎಂದು ಹೇಳಿದರು.