ಕೊಪ್ಪಳ: ನೀಟ್ ಪರೀಕ್ಷೆ (NEET Exam) ಯಲ್ಲಿ ರ್ಯಾಂಕ್ ಪಡೆದು ವೈದ್ಯನಾಗುವ ಕನಸು ಕಂಡಿದ್ದ ಬಡ ವಿದ್ಯಾರ್ಥಿಯ ನೆರವಿಗೆ ಶಾಸಕ ಪರಣ್ಣ ಮುನವಳ್ಳಿ ನಿಂತಿದ್ದಾರೆ.
ಹೌದು. ಕೊಪ್ಪಳ ತಾಲೂಕಿನ ಜಿನ್ನಾಪುರ ತಾಂಡಾದ ಯುವಕ ಪ್ರಶಾಂತ್ ಚಂಡೂರು ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದರೂ ಅಡ್ಮೀಶನ್ ಗೆ ಹಣ ಹೊಂದಿಸಲಾಗದೆ ಪರದಾಟ ನಡೆಸಿದ್ದನು. ಕೂಲಿ ನಾಲಿ ಮಾಡಿ ವಿದ್ಯಾಭ್ಯಾಸ ಮಾಡಿದ್ದ ಪ್ರತಿಭಾವಂತ ವೈದ್ಯನಾಗಲು ಅರ್ಹತೆ ಇದ್ದರೂ ಹಣ ಇಲ್ಲದೆ ಕನಸು ಕೈ ಚೆಲ್ಲುವ ಹಂತ ತಲುಪಿದ್ದನು. ಈ ವಿದ್ಯಾರ್ಥಿಯ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸವಿಸ್ತಾರವಾಗಿ ಸುದ್ದಿ ಬಿತ್ತರಿಸಿತ್ತು. ಇದೀಗ ಪಬ್ಲಿಕ್ ಟಿವಿಯಲ್ಲಿ ಸುದ್ದಿ ನೋಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಈ ವಿದ್ಯಾರ್ಥಿಯ ವಿಷಯ ಕೇಳಿ ಮೊದಲನೇ ವರ್ಷದ MBBS ಅಡ್ಮಿಶನ್ ಸೇರಿ ಎಲ್ಲಾ ಖರ್ಚು ವೆಚ್ಚವನ್ನು ತಾವೇ ಭರಿಸುವದಾಗಿ ವಿದ್ಯಾರ್ಥಿಗೆ ಭರವಸೆ ನೀಡಿದ್ದಾರೆ.
ಶಾಸಕರು ಬೆಂಗಳೂರನಲ್ಲಿರುವುದರಿಂದ ಅಡ್ಮಿಶನ್ ಒಂದೇ ದಿನ ಬಾಕಿ ಇತ್ತು. ಹೀಗಾಗಿ ಶಾಸಕರು ಕೂಡಲೇ ತಮ್ಮ ಮಗ ಸಾಗರನನ್ನು ಪ್ರಶಾಂತ್ ಅವರ ಮನೆಗೆ ಕಳಿಸಿ ಅಡ್ಮಿಶನ್ ಗೆ ಬೇಕಾದ ಹಣವನ್ನು ನೀಡಿ ವಿದ್ಯಾರ್ಥಿಗೆ ಸನ್ಮಾನ ಮಾಡಿ ಗ್ರಾಮಸ್ಥರ ಸಮ್ಮುಖದಲ್ಲಿಯೇ ಹಣವನ್ನು ನೀಡಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ಉತ್ತಮ ವೈದ್ಯನಾಗುವ ವಿದ್ಯಾರ್ಥಿಯ ಕನಸಿಗೆ ನೀರೆರೆದಿದ್ದಾರೆ. ಇದನ್ನೂ ಓದಿ: ನೀಟ್ನಲ್ಲಿ ರ್ಯಾಂಕ್ ಗಳಿಸಿದ ಕೊಪ್ಪಳ ಪ್ರತಿಭಾವಂತನಿಗೆ ಬೇಕಿದೆ ಸಹಾಯ ಹಸ್ತ
ಸರ್ಕಾರಿ ಕೋಟಾದಲ್ಲಿ ಸೀಟ್ ಸಿಕ್ಕರೂ ಸರ್ಕಾರಿ ಶುಲ್ಕ ಪಾವತಿಸಲಾಗದೆ ಪರದಾಟ ನಡೆಸಿದ್ದ ಪ್ರಶಾಂತ್ಗೆ ಸದ್ಯ ಗಂಗಾವತಿ ಶಾಸಕರ ಜೊತೆ ಕರ್ನಾಟಕದ ವಿವಿಧ ಭಾಗದಿಂದ ಜನರು ಸಹಾಯ ಮಾಡಿದ್ದಾರೆ. ಕೊಪ್ಪಳ ಜಿಲ್ಲೆಯ ನೂರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಒಂದು ಸಾವಿರ ರೂಪಾಯಿಂದ ಹೆಚ್ಚಿಗೆ ಪ್ರಶಾಂತ್ ಅವರ ಅಕೌಂಟ್ ಒಟ್ಟು 50 ಸಾವಿರ ರೂಪಾಯಿಗೂ ಹೆಚ್ಚು ಹಣ ಹಾಕಿ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಇದರಿಂದ ಸದ್ಯ ಪ್ರಶಾಂತ್ ಕೊಡಗು ಸರ್ಕಾರಿ ಮೆಡಿಕಲ್ ಕಾಲೇಜ್ ನಲ್ಲಿ ಅಡ್ಮಿಶನ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಇದರ ಜೊತೆಗೆ ಶಾಸಕರಿಗೆ ಹಾಗೂ ಕರುನಾಡಿನ ಜನರಿಗೆ ಮತ್ತು ಸುದ್ದಿ ಬಿತ್ತರಿಸಿದ ಪಬ್ಲಿಕ್ ಟಿವಿಗೆ ಪ್ರಶಾಂತ್ ಚಂಡೂರು ಧನ್ಯವಾದಗಳನ್ನು ತಿಳಿಸಿದ್ದಾರೆ.
ಪ್ರತಿಭೆಯಿಂದ ವೈದ್ಯಕೀಯ ಸೀಟ್ ಪಡೆದುಕೊಂಡ್ರು ಹಣ ಇಲ್ಲದೆ ಮಂಕಾಗಿ ಕೂತಿದ್ದ ಪ್ರಶಾಂತ್ಗೆ ಸದ್ಯ ಜನರ ಸಹಾಯ ಹಸ್ತದಿಂದ ವೈದ್ಯನಾಗುವ ಕನಸು ಮತ್ತಷ್ಟು ಗಟ್ಟಿಯಾಗಿದೆ. ಬಡತನದಿಂದ ಬಂದು ವೈದ್ಯನಾಗುವ ಈ ವಿದ್ಯಾರ್ಥಿಯಿಂದ ಸಮಾಜದ ಬಡ ಜನರಿಗೆ ಮುಂದಿನ ದಿನಗಳಲ್ಲಿ ಉತ್ತಮ ಸೇವೆ ಸಿಗಲಿ ಎನ್ನುವುದು ಎಲ್ಲರ ಆಶಯವಾಗಿದೆ.