Dharwad
ಶಾಸಕ ನಿಂಬಣ್ಣನವರ್ ಸಹೋದರನ ಪುತ್ರನ ಕಾರಿನ ಮೇಲೆ ಕಲ್ಲು ತೂರಾಟ

ಧಾರವಾಡ/ಹುಬ್ಬಳ್ಳಿ: ಶಾಸಕರ ಸಹೋದರನ ಪುತ್ರನ ಕಾರಿನ ಮೇಲೆ ಸಹೋದರ ಸಂಬಂಧಿಗಳೇ ಕಲ್ಲು ಎಸೆದು ದಾಳಿ ಮಾಡಿದ ಘಟನೆ ಕಲಘಟಗಿ ತಾಲೂಕಿನ ಸಂಗೆದೇವರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ್ ಸಹೋದರನ ಪುತ್ರ ನಾಗರಾಜ್ ನಿಂಬಣ್ಣನವರ್ ಎಂಬವರ ಕಾರಿನ ಮೇಲೆ ಶಾಸಕನ ಸಹೋದರನ ಮಕ್ಕಳು ಕಲ್ಲು ತೂರಿ ಹಲ್ಲೆಗೆ ಯತ್ನಿಸಿದ್ದಾರೆ. ನಾಗರಾಜ್ ಸಂಗೆದೇವರಕೊಪ್ಪ ಹೊಲಕ್ಕೆ ಹೋಗಿ ಮರಳಿ ವಾಪಸ್ ಮನೆಗೆ ಬರುವಾಗ ಮಾರುತಿ 800 ಕಾರಿ ಅಡ್ಡಗಟ್ಟಿದ್ದಾರೆ. ಜಮೀನಿನ ವಿಚಾರವಾಗಿ ಇದ್ದ ತಂಟೆಯ ಸಿಟ್ಟಿನಿಂದ ಕಲ್ಲಿನಿಂದ ಕಾರಿನ ಗ್ಲಾಸ್ ಒಡೆದು ಜೀವ ಬೆದರಿಕೆ ಹಾಕಿದ್ದಾರೆ.
ಅದೃಷ್ಟವಶಾತ್ ಯಾವುದೇ ಅಪಾಯವಾಗಿಲ್ಲ. ಈ ಕುರಿತು ಶಾಸಕರ ಸಹೋದರ ಸಂಬಂಧಿಗಳಾದ ಶಂಕರಪ್ಪ ಹನುಮಂತಪ್ಪ ನಿಂಬಣ್ಣವರ್, ಮಹಾಂತೇಶ್ ಹನುಮಂತಪ್ಪ ನಿಂಬಣ್ಣವರ್ ಹಾಗೂ ಸಂಗಮೇಶ್ ಹನುಮಂತಪ್ಪ ನಿಂಬಣ್ಣವರ್ ಇವರುಗಳ ಮೇಲೆ ದೂರು ದಾಖಲಾಗಿದೆ. ಕಲಘಟಗಿ ಸಿಪಿಐ ವಿಜಯ್ ಬಿರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
