ಐಜ್ವಾಲ್: ಮಕ್ಕಳು ಶುದ್ಧ ಮನಸ್ಸಿನ ದೇವರ ಪ್ರತಿರೂಪಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಸದ್ಯ ಈ ಮಾತಿಗೆ ನೈಜ ಸಾಕ್ಷಿಯಂತೆ ಮಿಜೋರಾಂನ ಸೈರಂಗ್ ಬಾಲಕ ಮಾಡಿದ ಮುಗ್ಧ ಮನಸ್ಸಿನ ಕಾರ್ಯ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ನಡೆದಿದ್ದೇನು?
ಆಟವಾಡುವ ವೇಳೆ ಬಾಲಕ ತುಳಿಯುತ್ತಿದ್ದ ಸೈಕಲ್ ಕೋಳಿ ಮರಿ ಮೇಲೆ ಹರಿದಿದ್ದು, ಪರಿಣಾಮ ಅದು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ತನ್ನಿಂದಲೇ ಕೋಳಿ ಮರಿ ಸಾವನ್ನಪ್ಪಿದೆ ಎಂದು ತಿಳಿಸಿದ ಬಾಲಕ ತಾನು ಕೂಡಿಟ್ಟಿದ್ದ ಹಣದೊಂದಿಗೆ ಕೋಳಿ ಮರಿಯನ್ನು ಕೈಯಲ್ಲಿ ಹಿಡಿದುಕೊಂಡು ಆಸ್ಪತ್ರೆಗೆ ತೆರಳಿದ್ದಾನೆ.
ಆಸ್ಪತ್ರೆಗೆ ತೆರಳಿದ ಬಾಲಕ ವೈದ್ಯರಿಗೆ ತಾನು ತಂದಿದ್ದ ಹಣವನ್ನು ನೀಡಿ ಕೋಳಿ ಮರಿಗೆ ಚಿಕಿತ್ಸೆ ನೀಡಲು ಮನವಿ ಮಾಡಿದ್ದಾನೆ. ಬಾಲಕನ ಈ ಫೋಟೋದೊಂದಿಗೆ ಆತನ ವಿವರಗಳನ್ನು ‘ಸಂಗಾ’ ಹೆಸರಿನ ವ್ಯಕ್ತಿಯೊಬ್ಬರು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಾಲಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಪೋಸ್ಟಿಗೆ ಇದುವರೆಗೂ 1 ಲಕ್ಷ ಮಂದಿ ಲೈಕ್ ಮಾಡಿದ್ದಾರೆ. 74 ಸಾವಿರ ಮಂದಿ ಶೇರ್ ಮಾಡಿದ್ದರೆ, 9 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಕನ ಈ ನಡೆಗೆ ಮೆಚ್ಚುಗೆ ಸೂಚಿಸಿರುವ ಹಲವು ಮಂದಿ ಆತನ ಪೋಷಕರು ಬಾಲಕನನ್ನು ಬೆಳೆಸಿದ ಪರಿಗೂ ಶಹಬ್ಬಾಶ್ ಗಿರಿ ನೀಡಿದ್ದಾರೆ.