– ಆರೋಪಿಗಳ ಬಂಧನಕ್ಕೆ ತಂಡ ರಚನೆ
ಕಲಬುರಗಿ: ಬಯಲು ಬಹಿರ್ದೆಸೆಗೆ ತೆರಳಿದ 14 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ(Rape) ಮಾಡಿ ಕೊಲೆ(Murder) ಮಾಡಿರುವ ಅಮಾನವೀಯ ಕೃತ್ಯ ಕಲಬುರಗಿ(Kalaburagi) ಜಿಲ್ಲೆಯ ಆಳಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅಫಜಲಪುರ ತಾಲೂಕಿನ ಬಾಲಕಿ ಆಳಂದ ತಾಲೂಕಿನ ಗ್ರಾಮದಲ್ಲಿರುವ ಅತ್ತೆ ಮನೆಯಿಂದ ಶಾಲೆಗೆ ಹೋಗುತ್ತಿದ್ದಳು. ಮಂಗಳವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬಹಿರ್ದೆಸೆಗೆ ಎಂದು ಹೊರ ಹೋಗಿದ್ದ ಬಾಲಕಿ ಸುಮಾರು ಹೊತ್ತು ಕಳೆದರೂ ಬಂದಿರಲಿಲ್ಲ. ಗಾಬರಿಗೊಂಡ ಬಾಲಕಿ ಕುಟುಂಬಸ್ಥರು, ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೈಮೇಲೆ ಎಳೆದಾಡಿ ತರಚಿದ ಗಾಯಗಳಾಗಿದ್ದು ವೇಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಲಾಗಿದೆ.
ಮೇಲ್ನೋಟಕ್ಕೆ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರವೆಸಗಿ ನಂತರ ಕೊಲೆಗೈದಿರುವ ವಿಚಾರ ಪೊಲೀಸ್ ಪ್ರಾಥಮಿಕ ತನಿಖೆಯಿಂದ ಬಯಲಾಗಿದೆ. ಇದನ್ನೂ ಓದಿ: ಹೂಡಿಕೆದಾರರಿಗೆ ‘ಕಾಂತಾರ’ ಸಿನಿಮಾದ ಉದಾಹರಣೆ ನೀಡಿದ ಕೇಂದ್ರ ಸಚಿವ ಪಿಯೂಶ್ ಗೋಯಲ್
9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ದೀಪಾವಳಿ ರಜೆಗೆ ತನ್ನ ಸ್ವಗ್ರಾಮಕ್ಕೆ ತೆರಳಿ, ನ.3 ರಿಂದ ಪರೀಕ್ಷೆ ಇರುವ ಕಾರಣ ಮಂಗಳವಾರ ಮರಳಿ ಬಂದಿದ್ದಳು. ಹೀಗೆ ಬಂದವಳು ಬಯಲು ಬಹಿರ್ದೆಸೆಗೆ ಹೋದಾಗ ದುಷ್ಕರ್ಮಿಗಳು ಅಮಾನವೀಯ ಕೃತ್ಯ ನಡೆಸಿದ್ದಾರೆ. ಸ್ಥಳಕ್ಕೆ ಕಲಬುರಗಿ ಎಸ್ಪಿ ಇಶಾ ಪಂತ್ ಸೇರಿ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕರ ಬಂಧನಕ್ಕೆ ಬಲೆ ಬೀಸಿದ್ದಾರೆ.