ಬೆಂಗಳೂರು: ರಾಜ್ಯ ಸರ್ಕಾರದ ಆದೇಶವಿಲ್ಲದೇ ಕೆಂಪು ದೀಪ ತೆಗೆಯಲ್ಲ ಅಂತಾ ಹೇಳಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆಯ ಸಚಿವ ಯು ಟಿ ಖಾದರ್ ಇಂದು ಆ ಕೆಂಪು ದೀಪ ಇರೋ ಕಾರು ಬಳಸೋದನ್ನೇ ನಿಲ್ಲಿಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಬೇಕು ಕೆಂಪು ದೀಪ ಬೇಕು ಅಂತೇನಿಲ್ಲ. ಈ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಗೊಂದಲಗಳು ಬಗೆಹರಿಯುವ ತನಕ ನಾನು ಸಚಿವರಿಗೆ ಕೊಟ್ಟಿರುವ ಸರ್ಕಾರಿ ಕಾರನ್ನ ಬಳಸುವುದಿಲ್ಲ. ಕೆಂಪು ದೀಪ ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಮಾಡುವ ತನಕ ಆ ಕಾರನ್ನ ಬಳಸುವುದಿಲ್ಲ. ನಾವು ಕೂಡ ನೆಮ್ಮದಿಯಿಂದ ಇರಬೇಕಲ್ಲ. ಹಾಗಾಗಿ ಸಚಿವರ ಕಾರನ್ನ ಬಳಸ್ತಿಲ್ಲ ಅಂತಾ ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ತಾನೇ ರಾಜ್ಯ ಸರ್ಕಾರದ ಆದೇಶವಿಲ್ಲದೇ ನಾನು ಕೆಂಪು ಗೂಟ ತೆಗೆಯಲ್ಲ. ಅಷ್ಟಕ್ಕೂ ಕೆಂಪು ಗೂಟವನ್ನು ನನ್ನ ತಲೆ ಮೇಲೆ ಇಟ್ಕೊಂಡು ಓಡಾಡ್ತಿಲ್ಲ. ಅದು ನನಗೆ ಸರ್ಕಾರ ಕೊಟ್ಟಿರೋ ಕಾರಿನ ಮೇಲೆ ಇದೆ ಅಂತಾ ಕೇಂದ್ರ ಸರ್ಕಾರದ ವಿರುದ್ಧ ಸಿಡಿಮಿಡಿಗೊಂಡಿದ್ದರು.
ಇದನ್ನೂ ಓದಿ: ರೆಡ್ಲೈಟನ್ನು ನನ್ನ ತಲೆ ಮೇಲೆ ಇಟ್ಕೊಂಡು ಸುತ್ತಾಡ್ತಿಲ್ಲ: ಖಾದರ್
ಇಂದು ಸಚಿವರಿಗೆ ಅಧಿಕೃತವಾಗಿ ನೀಡಿರುವ ಕಾರಿನಲ್ಲೇ ಓಡಾಡೋದನ್ನೆ ನಿಲ್ಲಿಸಿ ಸರ್ಕಾರ ನೀಡಿದ ಕೆಂಪು ಗೂಟವಿಲ್ಲದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಓಡಾಟ ಆರಂಭಿಸಿದ್ದಾರೆ.
ಇದನ್ನೂ ಓದಿ: ಮೋದಿಯವರಿಗೆ ಕೆಂಪು ದೀಪ ನಿಷೇಧ ಮಾಡಲು 16 ವರ್ಷ ಬೇಕಾಯ್ತಾ: ಖರ್ಗೆ ಪ್ರಶ್ನೆ
ಸೋಮವರ ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಈ ವಿಚಾರದ ಬಗ್ಗೆ ಮಾತನಾಡಿದ ಖಾದರ್ ಸರ್ಕಾರ ಆದೇಶ ಬಂದಿಲ್ಲ ಎಂದು ತಿಳಿಸಿದ್ದರು. ಅಷ್ಟೇ ಅಲ್ಲದೇ ಆದೇಶದ ಬಂದ ಬಳಿಕ ತೆಗೆಯುತ್ತೇನೆ ಎಂದು ಹೇಳಿದ್ದರು.