ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರಿಗೆ ಮತಾಂತರಗೊಂಡ ಹೆಣ್ಣುಮಕ್ಕಳ ಪರಿಸ್ಥಿತಿ ಗೊತ್ತಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಕನ್ನಡ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಸೆ, ಆಮಿಷ, ಬಡತನವನ್ನು ದುರುಪಯೋಗ ಮಾಡಿಕೊಂಡು ಮತಾಂತರ ಮಾಡಬಾರದು. ಕಾನೂನು ಪ್ರಕಾರ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಹೋಗಬಹುದು. ಕದ್ದುಮುಚ್ಚು ಮತಾಂತರ ಆಗುವಂತಿಲ್ಲ ಎಂದರು. ಇದನ್ನೂ ಓದಿ: ಪ್ರತಿಪಕ್ಷಗಳ ವಿರೋಧದ ನಡುವೆಯೂ ಮತಾಂತರ ನಿಷೇಧ ಮಸೂದೆ ಮಂಡನೆ
ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿ 2 ತಿಂಗಳ ಬಳಿಕ ಮತಾಂತರ ಆಗಬಹುದು. ಆ ಅವಧಿಯಲ್ಲಿ ಬೇಡವೆನಿಸಿದರೆ ಅರ್ಜಿ ವಾಪಸ್ ಪಡೆಯಬಹುದು. ಕಾಂಗ್ರೆಸ್, ಜೆಡಿಎಸ್ ನವರು ಇದಕ್ಕೆ ಯಾಕೆ ವಿರೋಧ ಮಾಡ್ತಾರೋ ಗೊತ್ತಿಲ್ಲ. ಡಿ.ಕೆ ಶಿವಕುಮಾರ್ ಅವರಿಗೆ ಮತಾಂತರ ಆದ ಹೆಣ್ಣುಮಕ್ಕಳ ಪರಿಸ್ಥಿತಿ ಗೊತ್ತಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇಂದೂ ಕಾವೇರಲಿದೆ ಬೆಳಗಾವಿ ಅಧಿವೇಶನ- ಸದನದಲ್ಲಿಂದು ಮತಾಂತರ ಮಾತಿನ ಕದನ
ಮತಾಂತರ ಮಾಡಿ ವಿದೇಶಗಳಿಗೆ ಮಾರಾಟ ಮಾಡಿದ್ದಾರೆ. ಅವರ ದೇಹ ಉಪಯೋಗಿಸಿಕೊಂಡ ಕೈಬಿಟ್ಟ ಉದಾಹರಣೆಗಳು ಸಾಕಷ್ಟಿವೆ. ಡಿಕೆಶಿ ಅವರಿಗೆ ಇವುಗಳನ್ನ ತೋರಿಸುತ್ತೇನೆ. ನಿನ್ನೆ ರಾಜಕಾರಣ ಮಾಡಿ ಸಭಾತ್ಯಾಗ ಮಾಡಿದ್ದಾರೆ. ರಾಜ್ಯದ ಜನ ಇದನ್ನ ಗಮನಿಸಿದ್ದಾರೆ. ಕಾನೂನು ಬದ್ಧವಾಗಿ ಮತಾಂತರ ನಿಷೇಧ ಕಾಯಿದೆಯನ್ನ ಜಾರಿಗೆ ತರುತ್ತೇವೆ ಎಂದು ಸಚಿವರು ಹೇಳಿದರು.