ನವದೆಹಲಿ: ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಬಂಡಾಯ ಎದ್ದಿದ್ದಾರಾ..? ಅಥಾವಾ ಸದಾನಂದಗೌಡರು ಪ್ರತ್ಯೇಕ ಲಿಂಗಾಯತ ಧರ್ಮದ ಪರವಾಗಿದ್ದರಾ..?. ಇಂದು ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಇಂತದೊಂದು ಪ್ರಶ್ನೆಗೆ ಕಾರಣವಾಗಿದೆ.
ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಲು ದೆಹಲಿಯಲ್ಲಿ ಲಿಂಗಾಯತ ಧರ್ಮ ಸಭಾ ರೂಪಿಸಿರುವ ಮೂರು ದಿನಗಳ ಸಮಾವೇಶವನ್ನ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಉದ್ಘಾಟಿಸಲಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದಿಂದ ದೂರವಿದ್ದ ಬಿಜೆಪಿ ನಾಯಕರ ನಡುವೆ ಡಿವಿಎಸ್ ಭಾಗಿ ಕುತೂಹಲ ಮೂಡಿಸಿದೆ.
ಪ್ರತ್ಯೇಕ ಲಿಂಗಾಯತ ಹೋರಾಟದಿಂದ ದೂರ ಇರುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಆದ್ರೆ ಇಂದು ಈ ಹೋರಾಟಕ್ಕೆ ಚಾಲನೆ ನೀಡುವ ಮೂಲಕ ಸದಾನಂದಗೌಡರು ಹೈಕಮಾಂಡ್ ಆಜ್ಞೆಯನ್ನೇ ಮೀರಿದಂತೆ ಕಾಣುತ್ತಿದೆ. ವಿಧಾನಸಭೆ ಚುನಾವಣೆ ಮುನ್ನ ಈ ಹೋರಾಟದಿಂದ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಿದ್ದ ಬೆನ್ನಲ್ಲೇ ಸದಾನಂದಗೌಡರ ಲಿಂಗಾಯತ ಪ್ರತ್ಯೇಕ ಹೋರಾಟ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಮಲ ವಿರೋಧಿ ಮಹಾಸಭೆ:
ರಾಜ್ಯ ಮೈತ್ರಿ ಸರ್ಕಾರ ರಚನೆ ವೇಳೆ ಒಗ್ಗಟ್ಟು ಪ್ರದರ್ಶಿಸಿದ್ದ ವಿರೋಧ ಪಕ್ಷಗಳ ಒಕ್ಕೂಟ್ಟ ಈಗ ಮತ್ತೊಮ್ಮೆ ಬಲ ಪ್ರದರ್ಶನಕ್ಕೆ ಸಿದ್ದವಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನ ಹಾಗೂ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶಕ್ಕೆ ಒಂದು ದಿನ ಬಾಕಿ ಈರುವಾಗಲೇ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೊಮ್ಮೆ ವಿಪಕ್ಷಗಳ ಶಕ್ತಿ ಪ್ರದರ್ಶನವಾಗಲಿದೆ.
ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎನ್ಸಿಪಿ ನಾಯಕ ಶರತ್ ಪವಾರ್ ಸೇರಿದಂತೆ ಎಡಪಕ್ಷಗಳ ನಾಯಕರು ದೆಹಲಿಯಲ್ಲಿ ಸಭೆ ಸೇರಲಿದ್ದಾರೆ. ಈ ಸಭೆಯ ನೇತೃತ್ವವನ್ನ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹೊತ್ತಿದ್ದು, ಇತರೆ ಪ್ರಾದೇಶಿಕ ಪಕ್ಷಗಳಿಗೂ ಆಹ್ವಾನ ನೀಡಲಾಗಿದೆ. ಸಂಸತ್ ಅಧಿವೇಶನಕ್ಕೆ ಒಂದು ದಿನವಷ್ಟೇ ಬಾಕಿ ಇದ್ದು ರಾಜಧಾನಿಯಲ್ಲಿ ಮತ್ತೊಮ್ಮೆ ಮಹಾಘಟಬಂದನ್ ಶಕ್ತಿ ಪ್ರದರ್ಶನ ಮಾಡಲು ವಿರೋಧ ಪಕ್ಷಗಳು ಪ್ಲಾನ್ ಮಾಡಿಕೊಂಡಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv