ತೆಲುಗಿನ ಖ್ಯಾತ ನಟ ಚಿರಂಜೀವಿ ಮನೆಯ ಮುಂದೆ ಆಚಾರ್ಯ ಸಿನಿಮಾದ ವಿತರಕರು ಇಂದು ಧರಣಿ ಮಾಡುವುದಾಗಿ ತಿಳಿಸಿದ್ದರು. ಅವರು ಹೇಳಿದಂತೆ ಧರಣಿಯನ್ನೂ ಆರಂಭಿಸಿದ್ದರು. ವಿತರಕರ ಒತ್ತಡಕ್ಕೆ ಕೊನೆಗೂ ಮೆಗಾಸ್ಟಾರ್ ಕುಟುಂಬ ಮಣಿದಿದೆ ಎಂದು ಹೇಳಲಾಗುತ್ತಿದೆ. ವಿತರಕ ಬೇಡಿಕೆಯನ್ನು ಅವರು ಈಡೇರಿಸಿದ್ದಾರೆ ಎನ್ನುವ ಮಾಹಿತಿ ಬರುತ್ತಿದೆ.
ಚಿರಂಜೀವಿ ಮತ್ತು ಪುತ್ರ ರಾಮ್ ಚರಣ್ ಕಾಂಬಿನೇಷನ್ ನ ಆಚಾರ್ಯ ಸಿನಿಮಾವನ್ನು ವಿತರಕರು ಭಾರೀ ಮೊತ್ತ ಕೊಟ್ಟು ಖರೀದಿಸಿದ್ದರು. ಈ ಸಿನಿಮಾದಿಂದ ಸಾಕಷ್ಟು ಹಣ ಹರಿದು ಬರುತ್ತದೆ ಎಂದು ಹೇಳಲಾಗಿತ್ತು. ಆದರೆ, ಆಚಾರ್ಯ ಸಿನಿಮಾ ತಂಡವನ್ನು ಕೈ ಹಿಡಿಯಲಿಲ್ಲ. ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗಿತ್ತು. ಹಾಗಾಗಿ ಹಣ ವಾಪಸ್ಸು ಮಾಡಬೇಕು ಎಂದು ವಿತರಕರು ಪಟ್ಟು ಹಿಡಿದಿದ್ದರು. ಅದಕ್ಕೆ ಮೆಗಾಸ್ಟಾರ್ ಕುಟುಂಬ ಕೂಡ ಒಪ್ಪಿದೆ ಎನ್ನಲಾಗುತ್ತದೆ. ಇದನ್ನೂ ಓದಿ: ರಾಕ್ಷಸರ ರೂಪದಲ್ಲಿ ಬರುತ್ತಿದ್ದಾರೆ ಡೈಲಾಂಗ್ ಕಿಂಗ್ ಸಾಯಿಕುಮಾರ್
ಕೆಲ ದಿನಗಳ ಹಿಂದೆಯಷ್ಟೇ ಚಿರಂಜೀವಿ ಮತ್ತು ಈ ಸಿನಿಮಾದ ನಿರ್ದೇಶಕರು ಒಟ್ಟಾಗಿ ಕೂತು ಚರ್ಚಿಸಿ, ವಾಪಸ್ಸು ಹಣ ಕೊಡುವ ಕುರಿತು ಮಾತನಾಡಿದ್ದರಂತೆ. ಆದರೆ, ಅದು ಜಾರಿಯಾಗಿರಲಿಲ್ಲವಂತೆ. ಚಿರಂಜೀವಿ ಅವರ ಮನೆ ಮುಂದೆ ಧರಣಿ ಕೂರುವುದಾಗಿ ವಿತರಕರು ಹೇಳುತ್ತಿದ್ದಂತೆಯೇ ಅವರನ್ನು ಕರೆದು ಬರೋಬ್ಬರಿ 20 ಕೋಟಿ ರೂಪಾಯಿಯನ್ನು ವಾಪಸ್ಸು ಮಾಡಿದ್ದಾರೆ ಎನ್ನುವ ಸುದ್ದಿಯಿದೆ.