– ಪೇಜಾವರ ಶ್ರೀ, ಅಮೃತಾನಂದಮಯಿ ಅಮ್ಮ ಭೇಟಿ
ಉಡುಪಿ: ಕೋಟಿ ಕೋಟಿ ಭಕ್ತರ ಆರಾಧ್ಯ ದೈವ- ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಮಾತಾ ಶ್ರೀ ಅಮೃತಾನಂದಮಯಿ ಮೊದಲ ಬಾರಿಗೆ ದೇವರ ನಾಡಿನಲ್ಲಿ ಕಾಣಿಸಿಕೊಂಡರು. ಸುಮಾರು ಐವತ್ತು ಸಾವಿರ ಮಂದಿ ಭಕ್ತರಿಗೆ ದರ್ಶನ ನೀಡಿ ಆಶೀರ್ವದಿಸಿದರು. ಭಜನೆ- ಸತ್ಸಂಗ- ಪ್ರವಚನದಲ್ಲಿ ಪಾಲ್ಗೊಂಡು ಭಕ್ತರನ್ನು ಪುಳಕಿತಗೊಳಿಸಿದರು.
ಮಾತಾ ಅಮೃತಾನಂದಮಯಿ ದೇವರ ನಾಡು ಕೇರಳದಲ್ಲಿ ಹುಟ್ಟಿ ವಿಶ್ವದಾದ್ಯಂತ ಭಕ್ತಕೋಟಿಯನ್ನು ಸಂಪಾದಿಸಿದ ಆಧ್ಯಾತ್ಮ ಗುರು. ಅಮ್ಮ ಎಂದೇ ಪ್ರಸಿದ್ಧಿ ಪಡೆದಿರುವ ಅಮೃತಾನಂದಮಯಿ ಮೊಟ್ಟ ಮೊದಲ ಬಾರಿಗೆ ದೇವಾಲಯಗಳ ನಗರಿ ಉಡುಪಿ ನಗರಕ್ಕೆ ಆಗಮಿಸಿದ್ದರು. ಅಮೃತ ವೈಭವದ ಮೂಲಕ ಸುಮಾರು 50 ಸಾವಿರ ಮಂದಿಗೆ ದರ್ಶನ ನೀಡಿದರು. ಉಡುಪಿಯ ಎಂಜಿಎಂ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಜನೆ- ಸತ್ಸಂಗ- ಪ್ರವಚನ ಕಾರ್ಯಕ್ರಮ ನಡೆಯಿತು. ಭಕ್ತ ಸಾಗರವನ್ನುದ್ದೇಶಿಸಿ ಮಾತಾ ಅಮೃತಾನಂದಮಯಿ ಪ್ರವಚನ ನೀಡಿದರು. ಮನುಷ್ಯ ಮನುಷ್ಯರ ನಡುವೆ ಹಗೆತನ ಇರಬಾರದು. ಮನುಷ್ಯ ಕಾಮ- ಕ್ರೋಧವನ್ನು ಜಯಿಸಿ ಬಾಳಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಜನನಾಯಕರು ಸೇರದಂತೆ ಪ್ರಮುಖ ಗಣ್ಯಾತಿಗಣ್ಯರು ಪಾಲ್ಗೊಂಡು, ಅಮ್ಮನ ಗುಣಗಾನ ಮಾಡಿದರು. ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಅಮ್ಮನ ಪಾದಸ್ಪರ್ಶದಿಂದ ಉಡುಪಿ ಪಾವನವಾಯ್ತು ಎಂದು ಹೇಳಿದರು.
ಇದಕ್ಕೂ ಮೊದಲು ಅಮೃತಾನಂದಮಯಿ ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿ ಕಡೆಗೋಲು ಕೃಷ್ಣನಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ಪೇಜಾವರ ಸ್ವಾಮೀಜಿಯವರನ್ನು ಭೇಟಿಯಾಗಿ ತಮ್ಮ ಸೇವಾಕಾರ್ಯಗಳ ಬಗ್ಗೆ ಮಾತುಕತೆ ನಡೆಸಿದರು. ಪರಸ್ಪರ ಇಬ್ಬರೂ ಗೌರವ ವಿನಿಮಯ ಮಾಡಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಭಾರತಿ ಗುರೂಜಿ, ಸಚಿವ ರುದ್ರಪ್ಪ ಲಮಾಣಿ, ಸಂಸದ ನಳೀನ್ ಕುಮಾರ್ ಕಟೀಲ್, ಶಾಸಕರಾದ ಕೋಟ ಶ್ರೀನಿವಾಸ್ ಪೂಜಾರಿ, ಸುನಿಲ್ ಕುಮಾರ್, ಶೋಭಾ ಕರಂದ್ಲಾಜೆ ಭಾಗಿಯಾಗಿ ಆಶೀರ್ವಾದ ಪಡೆದರು. ಸುಮಾರು 50 ಸಾವಿರ ಮಂದಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ನಿರಂತರ ಎರಡು ದಿನ ಆಶೀರ್ವಾದ ಕಾರ್ಯಕ್ರಮ ನಡೆಯಲಿದೆ.