ಬೆಂಗಳೂರು: ಮೊದಲ ಚಿತ್ರ ‘ಹರಿವು’ ಮೂಲಕವೇ ಪ್ರತಿಭಾವಂತ ನಿರ್ದೇಶಕರಾಗಿ ಹೊರಹೊಮ್ಮಿದ್ದವರು ಮಂಸೋರೆ. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯೂ ಬಂದಿತ್ತು. ಕಲಾತ್ಮಕ ಚಿತ್ರವಾದರೂ ಎಂಥಾ ಕಲ್ಲೆದೆಯನ್ನೂ ಕರಗಿಸಬಲ್ಲ ಸೂಕ್ಷ್ಮ ಗುಣದಿಂದ ಈ ಚಿತ್ರ ಜನಸಾಮಾನ್ಯರನ್ನೂ ತಲುಪಿಕೊಂಡಿತ್ತು. ಇಂಥಾ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿ ಇದೇ ತಿಂಗಳ 28ರಂದು ತೆರಕಾಣಲು ಅಣಿಗೊಂಡಿದೆ.
ಮೊದಲ ಚಿತ್ರ ಹರಿವು ಕಲಾತ್ಮಕ ಜಾಡಿನದ್ದಾಗಿತ್ತು. ಹಾಗಿದ್ದರೆ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ನಾತಿಚರಾಮಿಯೂ ಅದೇ ಬಗೆಯದ್ದಾ ಎಂಬ ಪ್ರಶ್ನೆ ಸಹಜವೇ. ಆದರೆ ಈ ಚಿತ್ರದ ಮೂಲಕ ಮಂಸೋರೆ ಹೊಸಾ ಪ್ರಯೋಗವೊಂದಕ್ಕೆ ಕೈಹಾಕಿದ್ದಾರೆ. ಅದೇನೆಂಬುದು ಈ ತಿಂಗಳ ಇಪ್ಪತ್ತೆಂಟರಂದೇ ಜಾಹೀರಾಗಬೇಕಾದರೂ ಇದೊಂದು ಕಲಾತ್ಮಕ ಕಮರ್ಶಿಯಲ್ ಚಿತ್ರ ಎನ್ನಲಡ್ಡಿಯಿಲ್ಲ.
ಕಮರ್ಶಿಯಲ್ ಅಂದಾಕ್ಷಣ ಸೊಂಟ ಬಳುಕಿಸೋ ಐಟಂ ಸಾಂಗು, ಮಸಾಲೆ ಐಟಮ್ಮುಗಳು ಅಂದುಕೊಂಡರೆ ನಾತಿಚರಾಮಿ ಆ ಥರದ್ದಲ್ಲ. ಆದರೆ ಭಿನ್ನ ಕಥಾ ಹಂದರ ಹೊಂದಿರೋ ಈ ಚಿತ್ರ ಹೊಸಾ ಅಲೆಯದ್ದು ಎನ್ನಲಡ್ಡಿಯಿಲ್ಲ. ಕಥೆಯ ಸೃಷ್ಟಿ ಮತ್ತು ಅದನ್ನು ಮನಸಿಗೆ ನಾಟುವಂತೆ ನಿರೂಪಣೆ ಮಾಡೋ ಚಾಕಚಕ್ಯತೆ ಮಂಸೋರೆ ಅವರಿಗಿದೆ ಎಂಬುದಕ್ಕೆ ಹರಿವು ಚಿತ್ರವೇ ಉದಾಹರಣೆ. ನಾತಿಚರಾಮಿಯಲ್ಲಿ ಬೇರೆಯದ್ದೇ ಥರದ ಕಥೆಯೊಂದಕ್ಕೆ ದೃಶ್ಯದ ಚೌಕಟ್ಟು ತೊಡಿಸಲಾಗಿದೆಯಂತೆ.
ಈ ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವವರು ಎನ್. ಸಂಧ್ಯಾರಾಣಿ. ಈಗಾಗಲೇ ಸೂಕ್ಷ್ಮ ಸಂವೇದನೆಯುಳ್ಳ ಬರಹಗಾರ್ತಿಯಾಗಿ, ಅಂಕಣಗಾರ್ತಿಯಾಗಿ, ಸಾಹಿತಿಯಾಗಿ ಗುರುತಿಸಿಕೊಂಡಿರೋ ಸಂಧ್ಯಾರಾಣಿ ಈ ಚಿತ್ರಕ್ಕಾಗಿ ವಿಭಿನ್ನವಾದ ಕಥೆ ಬರೆದಿದ್ದಾರಂತೆ. ಮೊದಲ ಸಲ ಅವರು ಸಂಭಾಷಣೆಯನ್ನೂ ಬರೆದಿರೋದು ವಿಶೇಷ.
ಹೇಳಿ ಕೇಳಿ ಕನ್ನಡ ಚಿತ್ರರಂಗದಲ್ಲಿ ಹೊಸಾ ಗಾಳಿ ಬೀಸುತ್ತಿದೆ. ಈ ಅಲೆಯಲ್ಲಿ ಬಂದು ಕಸುವು ಹೊಂದಿದ ಕಥೆಯನ್ನೆಲ್ಲ ಪ್ರೇಕ್ಷಕರು ಗೆಲ್ಲಿಸಿದ್ದಾರೆ. ನಾತಿಚರಾಮಿ ಕೂಡಾ ಪ್ರೇಕ್ಷಕರ ಮನಮುಟ್ಟುವ, ಕಾಡುವ ಚಿತ್ರವಾಗಿ ಮೂಡಿ ಬಂದಿದೆ ಎಂಬುದು ಈಗಾಗಲೇ ಸಾಬೀತಾಗಿದೆ. ಮಂಸೋರೆಯವರ ಎರಡನೇ ಮ್ಯಾಜಿಕ್ ಎಂಥಾದ್ದೆಂಬುದಕ್ಕೆ ಇನ್ನೊಂದು ವಾರದಲ್ಲಿ ಉತ್ತರ ಸಿಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv