ಕಾರವಾರ: ಪ್ರಧಾನಿ ನರೇಂದ್ರ ಮೋದಿ ನಡೆಸಿದ 91ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಶಿರಸಿ ತಾಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಶ್ಲಾಘಿಸಿದ್ದಾರೆ.
ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ ಮೋದಿ ಅವರು ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.
ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಕಳೆದ 35 ವರ್ಷದ ಹಿಂದೆ ಕೇವಲ 50 ಜೇನು ಕಾಲೋನಿಯನ್ನು ಇಟ್ಟುಕೊಂಡು ಜೇನು ಕೃಷಿ ಪ್ರಾರಂಭಿಸಿ ವಾರ್ಷಿಕ 1,500ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ ಜೇನು ಬೆಳೆಸುತ್ತಿದ್ದಾರೆ. ವಾರ್ಷಿಕ ಸರಾಸರಿ 4.5 ಟನ್ ಜೇನುತುಪ್ಪ ಉತ್ಪಾದಿಸುತ್ತಿದ್ದಾರೆ. ಇದನ್ನೂ ಓದಿ: ಆ.2 ರಿಂದ 15ರವರೆಗೆ ರಾಷ್ಟ್ರಧ್ವಜವನ್ನು ನಿಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಿ: ಮೋದಿ
ವಲಸ್ಪತಿ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ, ಅಂಟವಾಳ ಜೇನುತುಪ್ಪ, ಮಲ್ಲ್ಟಿಫ್ಲೋರಾ ಜೇನುತುಪ್ಪ ಸೇರಿದಂತೆ ಹಲವು ವಿಧದ ವನಸ್ಪತಿ ಜೇನು ತುಪ್ಪಗಳನ್ನು ಉತ್ಪಾದಿಸುತ್ತಾರೆ. ಇದಲ್ಲದೇ ನಿಸರಿ ಜೇನು ಕೃಷಿ ಸಹ ಮಾಡುತ್ತಿದ್ದು, ಜೇನಿನ ಮಕರಂದಗಳನ್ನು ಸಂಗ್ರಹಿಸಿ ಔಷಧಿಗೆ ಸಹ ಬಳಕೆ ಮಾಡುತ್ತಿದ್ದಾರೆ.
ಇವರ ಜೇನುಗಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಇಟ್ಟು ಅವುಗಳಿಂದ ತುಪ್ಪ ತಯಾರಿಸುತಿದ್ದು, ಜೇನು ಕೃಷಿಯ ಸಾಧನೆ ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ. ಈ ಕುರಿತು ಪ್ರಧಾನಿಯವರು ಪ್ರಸ್ತಾಪಿಸಿ ಇವರ ಸಾಧನೆಯನ್ನು ಬಣ್ಣಿಸಿದರು. ಇದನ್ನೂ ಓದಿ: ಅಸುರಕ್ಷತೆಯ ವಾತಾವರಣವಿದೆ, ಗನ್ ಮ್ಯಾನ್ ನೀಡಿ: ಜೆಡಿಎಸ್ ಸದಸ್ಯನ ಮನವಿ
ಈ ಹಿಂದೆ ಪಬ್ಲಿಕ್ ಟಿವಿಯಲ್ಲೂ ಸಹ ಇವರ ಸಾಧನೆ ಕುರಿತು ವರದಿ ಪ್ರಸಾರ ಮಾಡಲಾಗಿತ್ತು. ಇನ್ನು ಇವರು ತಮ್ಮ ಮನೆಯ ಸುತ್ತ ಔಷಧೀಯ ಸಸ್ಯಗಳನ್ನು ಸಹ ಬೆಳೆಯುತ್ತಿದ್ದು, ಜೇನು ಕೃಷಿಯಲ್ಲಿ ಸಾಧನೆ ಮಾಡುವ ಮೂಲಕ ಹಲವು ಪ್ರಶಸ್ತಿಗಳನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ.
ಕೃಷಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಜೇನು ಕೃಷಿ ಬಗ್ಗೆ ಉಚಿತ ವಸತಿ ಸೌಕರ್ಯ ನೀಡಿ ತರಬೇತಿ ಹಾಗೂ ಮಾಹಿತಿಯನ್ನು ನೀಡುತ್ತಾ ಬಂದಿದ್ದು, ಆಸಕ್ತರಿಗೆ ಮಾದರಿ ಎನಿಸಿದ್ದಾರೆ.
ಪ್ರಧಾನಿ ಹೆಸರು ಉಲ್ಲೇಖಿಸಿರುವ ಕುರಿತು ಸಂತಸ ಹಂಚಿಕೊಂಡ ಮಧುಕೇಶ್ವರ ಹೆಗಡೆಯವರು, ಜೇನು ಕೃಷಿ ಮೂಲಕ ಪ್ರಧಾನ ಮಂತ್ರಿಯವರು ನನ್ನನ್ನು ಗುರುತಿಸುವಂತೆ ಮಾಡಿದೆ. ಮೋದಿಯವರಂತಹ ಪ್ರಧಾನಿ ನನ್ನ ಹೆಸರನ್ನು ಉಲ್ಲೇಖಿಸಬಹುದು ಎಂಬ ನಿರೀಕ್ಷೆ ಇರಲಿಲ್ಲ. ನನಗೆ ಅಚ್ಚರಿಯ ಜತೆ ಸಂತಸವಾಯಿತು ಎಂದು ಹೇಳಿಕೊಂಡಿದ್ದಾರೆ.