Dakshina Kannada
ಡಿಕೆಶಿ ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಿಸ್ತಾರೆ: ಜನಾರ್ದನ ಪೂಜಾರಿ

ಮಂಗಳೂರು: ಉಪಚುನಾವಣೆಯಲ್ಲಿ ಗೆಲುವು ಸಾಧಿಸದೇ ಡಿಕೆ ಶಿವಕುಮಾರ್ ಸೋದರರು ವಿರಮಿಸಲ್ಲ. ಅವರು ಹಣ ಖರ್ಚು ಮಾಡಿ ಚುನಾವಣೆ ಗೆಲ್ಲಿಸ್ತಾರೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್, ಚುನಾವಣೆಗೆ ಖರ್ಚು ಮಾಡಲು ಸಾಧ್ಯವಿರುವ ವ್ಯಕ್ತಿ. ಹೀಗಾಗಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸದೇ ಡಿಕೆ ಶಿವಕುಮಾರ್ ಸೋದರರು ವಿರಮಿಸಲ್ಲ ಎಂದರು. ಇದನ್ನೂ ಓದಿ: ಆರ್ಆರ್ ನಗರ, ಶಿರಾ ಉಪಚುನಾವಣೆ- ಅಭ್ಯರ್ಥಿಗಳ ಆಸ್ತಿ ಎಷ್ಟಿದೆ?
ಚುನಾವಣೆಗೆ ಖರ್ಚು ಮಾಡಲು ಸಾಧ್ಯ ಇರುವ ವ್ಯಕ್ತಿ ಅಂದ್ರೆ ಡಿಕೆಶಿ. ಖರ್ಚು ಮಾಡುವಷ್ಟು ಹಣ ಡಿಕೆಶಿ ಅವರಲ್ಲಿದೆ. ಗೆಲುವು ಸಿಗುವವರೆಗೆ ಅವರು ನಿದ್ದೆ ಮಾಡಲ್ಲ. ಅವರೊಂದಿಗೆ ಡಿಕೆ ಸುರೇಶ್ ಮತ್ತು ಅವರ ತಾಯಿ ಕೂಡ ನಿದ್ದೆ ಮಾಡಲ್ಲ. ಅವರ ತಾಯಿ ಮಕ್ಕಳನ್ನ ಗೆಲ್ಲಿಸದೇ ಬಿಡೋದೇ ಇಲ್ಲ. ಅವರೇ ನಿಂತು ಈ ಚುನಾವಣೆ ಗೆಲ್ಲಿಸ್ತಾರೆ ಅನ್ನೋ ವಿಶ್ವಾಸ ಇದೆ ಎಂದು ತಿಳಿಸಿದರು.
ದೇಶಾದ್ಯಂತ ಒಟ್ಟು 56 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಪ್ರಕಟವಾಗಿದೆ. ನವೆಂಬರ್ 3ಕ್ಕೆ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ಸಿ ನಿಂದ ಕುಸುಮಾ ಹನುಮಂತರಾಯಪ್ಪ, ಬಿಜೆಪಿಯಿಂದ ಮುನಿರತ್ನ ಮತ್ತು ಜೆಡಿಎಸ್ ನಿಂದ ಕೃಷ್ಣಮೂರ್ತಿ ಬೈ ಎಲೆಕ್ಷನ್ ಅಖಾಡದಲ್ಲಿದ್ದು, ಆರ್.ಆರ್.ನಗರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಗಳಿವೆ. ಇದನ್ನೂ ಓದಿ: ಆರ್.ಆರ್.ನಗರ ಉಪಚುನಾವಣೆ- ಕೋಟ್ಯಧೀಶೆ, ಸಾಲಗಾರ್ತಿ ಆಗಿದ್ದಾರೆ ಕುಸುಮಾ
ಜೆಡಿಎಸ್ ಶಾಸಕರಾಗಿದ್ದ ಬಿ. ಸತ್ಯನಾರಾಯಣ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಗರಿಗೆದರಿದೆ. ಇನ್ನು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಅವರಿಗೆ ಹೈಕೋರ್ಟ್ ಈ ಹಿಂದೆ ಬಿಗ್ ರಿಲೀಫ್ ನೀಡಿತ್ತು. ಪರಾಜಿತ ಅಭ್ಯರ್ಥಿ ಮುನಿರಾಜು ತನ್ನನ್ನು ಶಾಸಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. 2018ರ ವಿಧಾನಸಭೆ ಚನಾವಣೆಯಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದಿಂದ ಮುನಿರತ್ನ ಅವರು ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಪಿ.ಎಂ.ಮುನಿರಾಜುಗೌಡ ತಕಾರರು ಅರ್ಜಿಯನ್ನು ಸಲ್ಲಿಸಿದ್ದರು.
