Dakshina Kannada
ಆಶ್ಲೇಷ ಪೂಜೆಗೆ ಮಧ್ಯರಾತ್ರಿಯಿಂದ ಬೆಳಗ್ಗೆಯವರೆಗೆ ಸಾಲು – ಸುಬ್ರಹ್ಮಣ್ಯದಲ್ಲಿ ಜನ ಜಂಗುಳಿ

ಮಂಗಳೂರು: ಇತಿಹಾಸ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆಶ್ಲೇಷ ಪೂಜೆ ಮಾಡಿಸಲು ಸಹಸ್ರಾರು ಭಕ್ತರು ಮಧ್ಯರಾತ್ರಿಯಿಂದ ಬೆಳಗ್ಗಿನವರೆಗೂ ಸರತಿ ಸಾಲಿನಲ್ಲಿ ನಿಂತು ರಶೀದಿ ತೆಗೆದುಕೊಂಡಿದ್ದಾರೆ.
ಇಂದು ಭಕ್ತರ ದಂಡೇ ಕುಕ್ಕೆಗೆ ಹರಿದು ಬಂದಿದೆ. ಆನ್ ಲೈನ್ ರಶೀದಿ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲೇ ರಶೀದಿ ನೀಡಲಾಗುತ್ತಿದೆ. ಆದರೆ ನಿಗದಿತ ರಶೀದಿ ಮಾತ್ರ ಕೌಂಟರ್ ನಲ್ಲಿ ಕೊಡುತ್ತಿರುವುದರಿಂದ ಇಂದಿನ ಪೂಜಾ ರಶೀದಿಗಾಗಿ ನಿನ್ನೆ ಮಧ್ಯರಾತ್ರಿ 12 ಗಂಟೆಯಿಂದಲೇ ಇಂದು ಮುಂಜಾನೆ 7 ಗಂಟೆಯವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ನಂತರ ಭಕ್ತರಿಗೆ ಆಶ್ಲೇಷ ಪೂಜಾ ರಶೀದಿ ನೀಡಲಾಯಿತು.
ದೇವಸ್ಥಾನದ ರಶೀದಿ ಕೌಂಟರ್ನಿಂದ ರಥಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಲುಗಟ್ಟಿ ಪೂಜಾ ರಶೀದಿಗಾಗಿ ನಿಂತಿದ್ದರು. ಬಳಿಕ ಕ್ಷೇತ್ರದ ಒಳಗೂ ದೇವರ ದರ್ಶನಕ್ಕೆ ಜನಜಂಗುಳಿಯಾಗಿತ್ತು.
ಕೊರೋನಾ ಆತಂಕದ ನಡುವೆಯೂ ಈ ರೀತಿ ಜನ ಸೇರಿದ್ದರಿಂದ ಆನ್ಲೈನ್ ಮೂಲಕವೇ ಸೇವಾ ರಶೀದಿಯನ್ನು ಪಡೆಯವ ವ್ಯವಸ್ಥೆಯನ್ನು ಮಾಡಬೇಕಿತ್ತು. ಆನ್ಲೈನ್ ನಲ್ಲಿ ಬುಕ್ಕಿಂಗ್ ಇಡದೇ ಅವ್ಯವಸ್ಥೆ ಮಾಡಿದ್ದಾರೆ. ಆಡಳಿತ ಮಂಡಳಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಭಕ್ತರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
