ಮಂಡ್ಯ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬಸಪ್ಪನ ಮತ್ತೊಂದು ಪವಾಡ ನಡೆದಿದ್ದು, 58 ವರ್ಷದ ಗುಡ್ಡಪ್ಪ ನೇಮಕ ವಿವಾದವನ್ನು ಬಸಪ್ಪ ಇತ್ಯರ್ಥ ಮಾಡಿದೆ.
ಮಂಡ್ಯ ತಾಲೂಕಿನ ದೊಡ್ಡಬಾನಸವಾಡಿ ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಹೊನ್ನನಾಯಕನಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸಪ್ಪ ಪವಾಡ ಮಾಡಿದೆ. ದೊಡ್ಡಬಾನಸವಾಡಿ ಗ್ರಾಮದ ಚೌಡೇಶ್ವರಿ, ಪಟ್ಟಲದಮ್ಮ, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರು ಇರಲಿಲ್ಲ. ಹೀಗಾಗಿ ಅರ್ಚಕರ ಆಯ್ಕೆಗೆ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಯಿತು.
ಪೂಜಾರಿ ಆಯ್ಕೆ ವಿವಾದದಿಂದ 58 ವರ್ಷದಿಂದ ಪಟ್ಟಲದಮ್ಮನ ಕೊಂಡ, ಬಂಡಿ ಹಬ್ಬಗಳು ನಿಂತಿದ್ದವು. ಪಟ್ಟಲದಮ್ಮ ದೇವಿಯ ಅರ್ಚಕರೊಬ್ಬರ ನಿಧನದ ಬಳಿಕ, ಇಲ್ಲಿ ಈ ಹಬ್ಬ ನಿಂತಿತ್ತು. ವಯೋಸಹಜವಾಗಿ 58 ವರ್ಷದ ಹಿಂದೆ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರು. ಆದರೆ ಅರ್ಚಕರ ಮೈ ಮೇಲೆ ದೇವರು ಬಾರದಿದ್ದಕ್ಕೆ 58 ವರ್ಷಗಳಿಂದ ಪಟ್ಟಲದಮ್ಮನ ಹಬ್ಬ ನಿಂತಿತ್ತು. ಇದೀಗ ಮತ್ತೆ ಹಬ್ಬ ಆಚರಣೆ ಮಾಡಬೇಕೆಂದು ದೈವಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆಗೆ ಗ್ರಾಮಸ್ಥರು ಹೋಗಿದ್ದರು. ಗ್ರಾಮಸ್ಥರ ಮನವಿ ಮೇರೆಗೆ ಊರಿಗೆ ಬಸಪ್ಪ ಬಂದಿತ್ತು. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ
ಊರಿಗೆ ಬಂದ ನಂತರ ದೇವಸ್ಥಾನಗಳ ಅರ್ಚಕರ ನೇಮಕ ಪ್ರಕ್ರಿಯೆಯನ್ನು ಬಸಪ್ಪ ಆರಂಭಿಸಿತು. ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಬಸಪ್ಪ ಗುರುತಿಸಿತು. ಬಳಿಕ ಅವರನ್ನು ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆಯನ್ನು ಮಾಡಿತು. ಬಸಪ್ಪನ ಪವಾಡ ಕಣ್ಣಾರೆ ಕಂಡ ಗ್ರಾಮಸ್ಥರು ಮೂಕವಿಸ್ಮಿತರಾದರು. ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್, ಪಟ್ಟಲದಮ್ಮ ದೇಗುಲಕ್ಕೆ ಮಂಜು, ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನು ಅರ್ಚಕರನ್ನಾಗಿ ಬಸಪ್ಪ ಆಯ್ಕೆ ಮಾಡಿತು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್