ಮಂಡ್ಯ: ಲಾಕ್ಡೌನ್ ನಡುವೆಯೂ ಮುಂಬೈನಿಂದ ಮಂಡ್ಯಕ್ಕೆ ಅಕ್ರಮವಾಗಿ ಬಂದು ಕೊರೊನಾ ಸೋಂಕಿಗೆ ತುತ್ತಾಗಿರುವ ವ್ಯಕ್ತಿಯ ಟ್ರವಲ್ ಹಿಸ್ಟರಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಈ ವಿಚಾರವಾಗಿ ಮಾತನಾಡಿರುವ ಮಂಡ್ಯದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್, ಇಂದು ನಾಗಮಂಗಲ ತಾಲೂಕಿನಲ್ಲಿ ಒಂದು ಪಾಸಿಟಿವ್ ದೃಢಪಟ್ಟಿದೆ. ಸೋಂಕಿತ ಮುಂಬೈಯಲ್ಲಿ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಲಾಕ್ಡೌನ್ ಮಧ್ಯೆ ಏಪ್ರಿಲ್ 22ರಂದು ನಾಗಮಂಗಲಕ್ಕೆ ಬಂದಿದ್ದಾರೆ. ಏಪ್ರಿಲ್ 24ರಂದು ಪರೀಕ್ಷೆ ಮಾಡಲಾಗಿದೆ. ಇಂದು ಪಾಸಿಟಿವ್ ವರದಿ ದೃಢಪಟ್ಟಿದೆ ಎಂದು ಹೇಳಿದ್ದಾರೆ.
ಸೋಂಕಿತ ಮುಂಬೈಯಿಂದ ಖರ್ಜೂರ ಸಾಗಿಸುವ ಕ್ಯಾಂಟರ್ ನಲ್ಲಿ ಪ್ರಯಾಣ ಮಾಡಿದ್ದಾರೆ. ಲಾಕ್ಡೌನ್ ಇದ್ದರೂ ಉಲ್ಲಂಘನೆ ಮಾಡಿ ತಪ್ಪು ಮಾಡಿದ್ದಾರೆ. ಏನು ಕ್ರಮಕೈಗೊಳ್ಳಬೇಕೆಂದು ಪರಿಶೀಲನೆ ಮಾಡುತ್ತೇವೆ. ಪಾಸಿಟಿವ್ ವ್ಯಕ್ತಿಯ ಜೊತೆ ಬಾಮೈದ, ಬಾಮೈದನ ಹೆಂಡತಿ, ಮಕ್ಕಳನ್ನು ಸಂಪರ್ಕದಲ್ಲಿ ಇದ್ದರು. ಒಬ್ಬ ವ್ಯಕ್ತಿಯ ಕಾಂಟ್ಯಾಕ್ಟ್ ನಂಬರ್ ಪಡೆದು ಕೊಂಡಿದ್ದೇವೆ. ಅವರ ಚನ್ನರಾಯಪಟ್ಟಣದವರಾದ ಕಾರಣ ಹಾಸನ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಏಪ್ರಿಲ್ 20ರಂದು ಮುಂಬೈನಿಂದ ಟ್ರಕ್ ಏರಿದ ಈತ, ಉಡುಪಿಗೆ ಬಂದು ಪೆಟ್ರೋಲ್ ಬಂಕ್ ಬಳಿ ಸ್ನಾನ ಮಾಡಿ ಅಲ್ಲೇ ತಿಂಡಿ ತಿಂದಿದ್ದಾರೆ. ಅದೇ ವಾಹನದಲ್ಲಿ ಮತ್ತೆ ಪ್ರಯಾಣ ಬೆಳಿಸಿದ ಬಳಿಕ ನಂತರ ಚನ್ನರಾಯಪಟ್ಟಣಕ್ಕೆ ಬಂದು ಇಳಿದು, ಚನ್ನರಾಯಪಟ್ಟಣದಿಂದ ಬಾಮೈದನ ಕಾರಿನಲ್ಲಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಹಿಂದೆ ವಾಸವಿದ್ದವರ ಕಾಲಿ ಮಾಡಿಸಿ ಇವರು ಮತ್ತು ಇವರ ಪತ್ನಿ ಆದೇ ಮನೆಯಲ್ಲಿ ವಾಸವಿದ್ದಾರೆ ಎನ್ನಲಾಗಿದೆ.
ಸೋಂಕಿತನ ಜೊತೆ ಆತನ ಹೆಂಡತಿ, ಬಾಮೈದ ಮತ್ತು ಅವರ ಕುಟುಂಬ ಪ್ರೈಮರಿ ಕಾಂಟ್ಯಾಕ್ಟ್ನಲ್ಲಿದ್ದಾರೆ. ಟ್ರಕ್ ಡ್ರೈವರ್, ಮತ್ತು ಇನ್ನೊಬ್ಬ ವ್ಯಕ್ತಿ ಚನ್ನರಾಯಪಟ್ಟಣದವರು. ಇವರನ್ನು ಹಾಸನ ಜಿಲ್ಲಾಧಿಕಾರಿ ಪರೀಕ್ಷೆ ಮಾಡಿಸುತ್ತಾರೆ. ಅವರ ಕುಟುಂಬದವರ ಪರೀಕ್ಷೆ ಮಾಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಮಂಡ್ಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ.