ಚಿತ್ರದುರ್ಗ: ಆತ್ಮಹತ್ಯೆಗೆ ಶರಣಾಗುವುದಾಗಿ ವಾಟ್ಸಪ್ ಗ್ರೂಪ್ನಲ್ಲಿ ಪೊಲೀಸರನ್ನೇ ಬ್ಲಾಕ್ ಮೇಲ್ ಮಾಡಿರುವ ಕೃತ್ಯ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
ನಮ್ಮ ಚಿತ್ರದುರ್ಗ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಚಿತ್ರಹಳ್ಳಿ ಗ್ರಾಮದ ಶ್ರೀಧರ್ ಚಿತ್ರಹಳ್ಳಿ ಸಾಮಾಜಿಕ ಕಾರ್ಯಕರ್ತರಾಗಿ (RTI ಕಾರ್ಯಕರ್ತ) ಗುರುತಿಸಿಕೊಂಡಿದ್ದರು. ಇಂದು ನನ್ನ ಸಾವಿಗೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಠಾಣೆ ಪೊಲೀಸರು ಹಾಗೂ ಪಿಎಸ್ಐ ಕಾರಣ ಎಂದು ಸ್ಟೇಟಸ್ ಹಾಕಿಕೊಂಡಿದ್ದರು. ಹೀಗಾಗಿ ವಾಟ್ಸಪ್ ಗ್ರೂಪ್ ನೋಡಿ ಎಚ್ಚೆತ್ತ ಚಿತ್ರದುರ್ಗ ಡಿವೈಎಸ್ಪಿ ಪಾಂಡುರಂಗ ಶ್ರೀಧರ್ಗೆ ಸಂದೇಶ ಕಳುಹಿಸಿದ್ದು ‘ನನ್ನ ಕರೆ ಸ್ವೀಕರಿಸಿ ಅಥವಾ ನನಗೆ ಕರೆ ಮಾಡಿ, ತಪ್ಪು ನಿರ್ಧಾರ ಕೈಗೊಳ್ಳಬೇಡಿ’ ಎಂದು ಡಿವೈಎಸ್ಪಿ ಮನವಿ ಮಾಡಿ ಅವರ ಮನವೊಲಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕನ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದ ವಿದ್ಯಾರ್ಥಿಗಳು
ಶ್ರೀಧರ್ ಚಿತ್ರಹಳ್ಳಿಯ ನಿರ್ಧಾರದಿಂದ ಬೆಚ್ಚಿದ ಪೊಲೀಸರು ಆತನ ಜೀವ ರಕ್ಷಿಸಲು ಹುಡುಕಾಟ ಆರಂಭಿಸಿ ಈ ನಿರ್ಧಾರದ ಹಿಂದೆ ಇರುವ ಅಸಲಿ ಕಾರಣ ಪತ್ತೆಹಚ್ಚಿದ್ದಾರೆ. ಶ್ರೀಧರ್ ಅದೇ ಗ್ರಾಮದ ಶಿವಪ್ಪ ಎಂಬುವರಿಗೆ ಬೇಕರಿಗಾಗಿ ಕಟ್ಟಡವನ್ನು ಬಾಡಿಗೆ ನೀಡಿದ್ದರು. ಆದರೆ ಆತ ಶ್ರೀಧರ್ಗೆ ಬಾಡಿಗೆ ಹಣ ನೀಡದೆ ಮೋಸ ಮಾಡಿದ್ದಾರೆಂದು ಆರೋಪ ಕೇಳಿ ಬಂದಿತ್ತು. ಅದನ್ನು ಪೊಲೀಸರ ಗಮನಕ್ಕೆ ತರಲಾಗಿತ್ತು. ಆದರೆ ನಿರ್ಲಕ್ಷ್ಯ ವಹಿಸಿರುವ ಪೊಲೀಸರು ನ್ಯಾಯ ಒದಗಿಸಿಲ್ಲ ಎಂಬರ್ಥದಲ್ಲಿ ಈ ತೀರ್ಮಾನಕ್ಕೆ ಬಂದಿದ್ದರು. ಬಳಿಕ ಶ್ರೀಧರ್ಗೆ ಪೊಲೀಸರು ಮತ್ತು ಸಾಮಾಜಿಕ ಕಾರ್ಯಕರ್ತರು ಕರೆ ಮಾಡಿ ಸಮಾಧಾನ ಪಡಿಸಿ, ಆತ್ಮಹತ್ಯೆ ನಿರ್ಧಾರ ಕೈ ಬಿಡುವಂತೆ ತಿಳಿವಳಿಕೆ ಹೇಳಿದ್ದಾರೆ. ಹಾಗೆಯೇ ಚಿತ್ರದುರ್ಗಕ್ಕೆ ಬಂದು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮನವಿಮಾಡಿದ್ದಾರೆ. ಹೀಗಾಗಿ ಸದ್ಯ ಚಿತ್ರದುರ್ಗಕ್ಕೆ ಬರಲು ಸಮ್ಮತಿಸಿದ ಶ್ರೀಧರ್ ಚಿತ್ರಹಳ್ಳಿ ಡಿವೈಎಸ್ಪಿ ಪಾಂಡುರಂಗ ಜೊತೆ ಮಾತುಕತೆ ನಡೆಸಿ ನ್ಯಾಯ ಪಡೆಯಲು ಮುಂದಾಗಿದ್ದಾರೆ. ಇದನ್ನೂ ಓದಿ: ಹಿಂದೂ ಧರ್ಮಕ್ಕೆ ಮತಾಂತರಗೊಂಡ ಕೇರಳದ ಖ್ಯಾತ ಸಿನಿಮಾ ನಿರ್ದೇಶಕ ಅಲಿ ಅಕ್ಬರ್